05/06/2026

Law Guide Kannada

Online Guide

ಅನುಕಂಪದ ನೌಕರಿ: ವಿವಾಹಿತ ಪುತ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಸುಪ್ರೀಂ

ನವದೆಹಲಿ: ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿಗೆ ನೇಮಕಾತಿ ಮಾಡುವ ಹಕ್ಕಿಗೆ ಸಂಬಂಧಿಸಿದಂತೆ ವಿವಾಹಿತ ಪುತ್ರಿಯರಿಗೆ ಸುಪ್ರೀಂ ಕೋರ್ಟ್ ಗುಡ್ ನ್ಯೂಸ್ ನೀಡಿದೆ.

ಕುಟುಂಬ ವ್ಯಾಪ್ತಿಯಿಂದ ವಿವಾಹಿತ ಹೆಣ್ಣುಮಕ್ಕಳನ್ನು ಹೊರಗಿಡುವುದು ಸಾಧ್ಯವಿಲ್ಲ. ಕುಟುಂಬ’ದ ವ್ಯಾಖ್ಯಾನದಿಂದ ವಿವಾಹಿತ ಪುತ್ರಿಯರನ್ನು ಹೊರಗಿಡುವುದು ನ್ಯಾಯಸಮ್ಮತವಲ್ಲ ಮತ್ತು ಸಾಂವಿಧಾನಿಕವಾಗಿ ಅದು ಸಿಂಧುವಲ್ಲ ಎಂದು ಹೇಳುವ ಮೂಲಕ ಕುಟುಂಬ ವ್ಯಾಪ್ತಿಗೆ ಹೊಸ ವ್ಯಾಖ್ಯೆ ಬರೆದಿರುವ ಸುಪ್ರೀಂಕೋರ್ಟ್ ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶ ವಜಾಗೊಳಿಸಿದೆ.

ಅನುಕಂಪದ ಆಧಾರದಲ್ಲಿ ನೇಮಕಾತಿ ವಿಚಾರವಾಗಿ ವಿವಾಹಿತ ಪುತ್ರಿಯನ್ನು ಕುಟುಂಬದ ವ್ಯಾಖ್ಯಾನದಿಂದ ಹೊರಗಿಟ್ಟು ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ನ್ಯಾಯಪೀಠ ವಜಾಗೊಳಿಸಿ ಐತಿಹಾಸಿಕ ತೀರ್ಪು ಪ್ರಕಟಿಸಿದೆ,  ನ್ಯಾಯಬೆಲೆ ಅಂಗಡಿಯೊಂದರ ವಿತರಕ (ಡೀಲರ್) ಮೃತರಾದ ಬಳಿಕ ಅವರ ಪುತ್ರಿಯು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠವು, ಅವಲಂಬನೆ, ಹಣಕಾಸಿನ ಅಗತ್ಯ, ವಸತಿ ಹಾಗೂ ಡೀಲರ್ ಶಿಪ್ ಗೆ ಸಂಬಂಧಿಸಿದ ಹೊಣೆಗಾರಿಕೆಯನ್ನು ನಿರ್ವಹಿಸುವ ಅರ್ಜಿದಾರರ ಸಾಮರ್ಥ್ಯವನ್ನು ಪರಿಗಣಿಸಬೇಕಾಗುತ್ತದೆ. ಅವಲಂಬನೆಯು ವಾಸ್ತವದ ಪ್ರಶ್ನೆಯಾಗಿದ್ದು, ಮದುವೆಯಾದ ಮಾತ್ರಕ್ಕೆ ಮಗಳು ಆಕೆಯ ತವರಿನೊಂದಿಗಿನ ಬಾಂಧವ್ಯವನ್ನು ಕಡೆದುಕೊಳ್ಳುವುದಿಲ್ಲ ಅಥವಾ ತವರು ಕುಟುಂಬದ ಮೇಲೆ ಆಕೆ ಅವಲಂಬನೆ ಹೊಂದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿ ಹೆಚ್ಚಿನ ಸಂದರ್ಭಗಳಲ್ಲಿ ಪುತ್ರರು ಕುಟುಂಬದ ವ್ಯಾಖ್ಯಾನಕ್ಕೆ ಒಳಪಟ್ಟಿದ್ದರೂ ಕುಟುಂಬದ ಮೇಲೆ ಅವಲಂಬಿತರಾಗಿರುವುದಿಲ್ಲ’ ಎಂದು ಪೀಠವು ಹೇಳಿದೆ.

‘ವಿವಾಹಿತ ಪುತ್ರಿ ತವರು ಮನೆಯ ಅಗತ್ಯಗಳನ್ನು ಪೂರೈಸದೇ ಇರಬಹುದು’ ಎಂಬ ರಾಜ್ಯದ ವಾದವನ್ನು ‘ಅಸಮರ್ಥನೀಯ. ‘ಅರ್ಜಿದಾರರು ಮದುವೆಯಾದ ಬಳಿಕವೂ ಅದೇ ಊರಿನಲ್ಲಿ ಇದ್ದು ಕೊಂಡು ನ್ಯಾಯಬೆಲೆ ಅಂಗಡಿಯ ಕಾರ್ಯಾಚರಣೆಯಲ್ಲಿ ತಾಯಿಗೆ ಸಕ್ರಿಯವಾಗಿ ಸಹಕಾರ ನೀಡಿದ್ದಾರೆ. ತಾಯಿಯ ಸಾವಿನ ಬಳಿಕ ಅಂಧರೊಬ್ಬರೂ ಸೇರಿದಂತೆ ಸಹೋದರಿಯರ ಪೋಷಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಹೇಳಿದೆ.

‘ಅನುಕಂಪದ ಆಧಾರದ ನೇಮಕಾತಿ ಕೋಟಾವು ಉತ್ತರಾಧಿಕಾರದ ಹಕ್ಕನ್ನು ಅಥವಾ ಡೀಲರ್ ಶಿಪ್ ನಲ್ಲಿ ಅನುವಂಶೀಯ ಹಕ್ಕು ಸ್ಥಾಪಿಸುವ ಉದ್ದೇಶವನ್ನು ಹೊಂದಿಲ್ಲ. ಬದಲಾಗಿ, ಮೃತ ಡೀಲರ್ ಅವರ ಅವಲಂಬಿತ ಕುಟುಂಬಕ್ಕೆ ತಕ್ಷಣದ ಹಣಕಾಸು ಪರಿಹಾರ ಒದಗಿಸುವುದು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ನಿರಂತರತೆ ಖಚಿತಪಡಿಸಿಕೊಳ್ಳುವುದೇ ಆಗಿದೆ’ ಎಂದು ಸ್ಪಷ್ಟಪಡಿಸಿದೆ.

‘ಮದುವೆಯಾದ ಹೊರತಾಗಿಯೂ ಪುತ್ರರನ್ನು ಕುಟುಂಬದ ವ್ಯಾಖ್ಯಾನದಿಂದ ಕಾಯ್ದೆಯು ಹೊರಗಿಡುವುದಿಲ್ಲ. ಆದರೆ ಅದೇ ಕಾರಣಕ್ಕೆ ಹೆಣ್ಣುಮಕ್ಕಳನ್ನು ಹೊರಗಿಡಲಾಗುತ್ತದೆ. ಮದುವೆಯಾದ ಹೆಣ್ಣುಮಕ್ಕಳು ಬೇರೆ ಕುಟುಂಬದ ಭಾಗವಾಗುತ್ತಾರೆ ಹಾಗೂ ತವರು ಕುಟುಂಬದೊಂದಿಗಿನ ಎಲ್ಲ ಬಾಂಧವ್ಯಗಳನ್ನು ಕಳೆದುಕೊಳ್ಳುತ್ತಾರೆ ಎಂಬ ಹಳೆಯಕಾಲದ ಲಿಂಗ ತಾರತಮ್ಯ ಧೋರಣೆ ಇಲ್ಲಿದೆ. ಇದು ಸಂವಿಧಾನದಲ್ಲಿನ ಸಮಾನತೆಯ ಆಶಯಕ್ಕೆ ವಿರುದ್ಧವಾದದ್ದು ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.