21/07/2026

Law Guide Kannada

Online Guide

ಕೇಳದೇ ಇರುವ ಪರಿಹಾರ ನೀಡಲು ನ್ಯಾಯಾಲಯಕ್ಕೂ ಸಾಧ್ಯವಿಲ್ಲ: ಹೈಕೋರ್ಟ್ ತೀರ್ಪು ರದ್ದುಪಡಿಸಿದ ಸುಪ್ರೀಂ

ನವದೆಹಲಿ: ಸಿವಿಲ್ ದಾವೆಯಲ್ಲಿ ವಾದಿಯು ಪರಿಹಾರಧನ ಕೋರದಿದ್ದಲ್ಲಿ, ನ್ಯಾಯಾಲಯವು ಸ್ವಯಂಪ್ರೇರಿತವಾಗಿ ಅಂತಹ ಪರಿಹಾರವನ್ನು ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಪಡಿಸಿದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎಸ್. ವಿ. ಎನ್. ಭಟ್ಟಿ ಮತ್ತು ಅತುಲ್ ಎಸ್. ಚಂದುರ್ಕರ್ ಅವರಿದ್ದ ಪೀಠವು,, ನಾಗರಿಕ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 100ರ ಅನ್ವಯ ಎರಡನೇ ಮೇಲ್ಮನವಿಗಳನ್ನು ಮರುಪರಿಶೀಲಿಸಲು ಹೈಕೋರ್ಟ್ಗೆ ಹಿಂದಿರುಗಿಸಿತು

ವಾದ ಪತ್ರದಲ್ಲಿ ಕೋರದ ಪರಿಹಾರವನ್ನು ನ್ಯಾಯಾಲಯ ನೀಡಲು ಸಾಧ್ಯವಿಲ್ಲ ಪರಿಹಾರ ಧನಕ್ಕಾಗಿ ಪ್ರಾರ್ಥನೆ ಇಲ್ಲದಿದ್ದರೆ ಪರಿಹಾರಧನ ನೀಡಲಾಗುವುದಿಲ್ಲ ಹೀಗೆ ಮಾಡುವುದು ದಾವೆಯಲ್ಲಿ ಕೋರದ ಹೊಸ ಪರಿಹಾರವನ್ನು ಸೃಷ್ಟಿಸಿದಂತಾಗಿದ್ದು, ಅದು ನ್ಯಾಯದ ವಿಫಲತೆಗೆ ಕಾರಣವಾಗುತ್ತದೆ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿತು.

ವಾದಿಯು ಕೇವಲ ಆಜ್ಞಾಪಕ ಪ್ರತಿ ಬಂಧಕಾಜ್ಞೆ (Mandatory Injunction) ಹಾಗೂ ಶಾಶ್ವತ ಪ್ರತಿಬಂಧಕಾಜ್ಞೆ (Permanent Injunction) ಮಾತ್ರ ಕೋರಿದ್ದನು. ಯಾವುದೇ ಹಂತದಲ್ಲಿಯೂ ಪರಿಹಾರಧನ ಅಥವಾ ನಷ್ಟಪರಿಹಾರವನ್ನು ಕೇಳಿರಲಿಲ್ಲ. ಆದರೂ, ಹೈಕೋರ್ಟ್ ಕಟ್ಟಡ ತೆರವುಗೊಳಿಸುವ ಆದೇಶವನ್ನು ಬದಲಿಸಿ, ವಾದಿಯ ಕಾನೂನುಬದ ವಾರಸುದಾರರಿಗೆ ಪರಿಹಾರಧನವನ್ನು ಮೌಲ್ಯಮಾಪನ ಮಾಡಿ ಪಾವತಿಸುವಂತೆ ನಿರ್ದೇಶಿಸಿತ್ತು.

ಇದನ್ನು ತೀವ್ರವಾಗಿ ಆಕ್ಷೇಪಿಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠವು, “ವಾದಿಯು ಎಂದಿಗೂ ಪರಿಹಾರಧನವನ್ನು ಕೋರಿರಲಿಲ್ಲ. ಅಂತಹ ಬೇಡಿಕೆಯೇ ಇಲ್ಲದ ಸಂದರ್ಭದಲ್ಲಿ, ನ್ಯಾಯಾಲಯವು ಒಂದು ಪಕ್ಷಕ್ಕೆ ಮತ್ತೊಂದು ಪಕ್ಷದ ವೆಚ್ಚದಲ್ಲಿ ಪರಿಹಾರ ನೀಡುವ ಹೊಸ ಪರಿಹಾರವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಅಲ್ಲದೆ, ವಾರಸುದಾರರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಹಣದ ಪರಿಹಾರವನ್ನು ಸ್ವೀಕರಿಸಲು ಬಲವಂತಪಡಿಸಲು ಆಗುವುದಿಲ್ಲ” ಎಂದು ತಿಳಿಸಿತು.

ಏನಿದು ಪ್ರಕರಣ..
ಎರಡು ಪ್ರತ್ಯೇಕ ದಾವೆಗಳನ್ನು ಹೂಡಿದ್ದ ವಾದಿಯು , ಒಂದರಲ್ಲಿ, ತನ್ನ ಮನೆಯ ಸಮೀಪದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾದ ಗೋಡೆಯನ್ನು ತೆರವುಗೊಳಿಸುವಂತೆ ಹಾಗೂ ಮುಂದಿನ ನಿರ್ಮಾಣವನ್ನು ತಡೆಯುವ ಶಾಶ್ವತ ನಿರ್ಬಂಧಕಾಜ್ಞೆ ನೀಡುವಂತೆ ಕೋರಿದ್ದರು. ಮತ್ತೊಂದು ದಾವೆಯಲ್ಲಿ, ತನ್ನ ಮನೆಯ ಗೋಡೆಯ ಮೇಲೆ ಶಾಲಾ ಕಟ್ಟಡದ ಲಿಂಟಲ್ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಅದನ್ನು ತೆರವುಗೊಳಿಸುವಂತೆ ಆಜ್ಞಾಪಕ ನಿರ್ಬಂಧಕಾಜ್ಞೆಗೆ ಮನವಿ ಮಾಡಿದ್ದರು.

ವಿಚಾರಣಾ ನ್ಯಾಯಾಲಯವು ಎರಡೂ ದಾವೆಗಳನ್ನು ಅಂಗೀಕರಿಸಿ, ಸಂಬಂಧಿತ ಕಟ್ಟಡಗಳನ್ನು ತೆರವುಗೊಳಿಸುವಂತೆ ಆದೇಶಿಸಿತ್ತು. ಮೊದಲ ಮೇಲ್ಮನವಿ ನ್ಯಾಯಾಲಯವೂ ಆ ತೀರ್ಪನ್ನು ದೃಢಪಡಿಸಿತ್ತು.

ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಂತೆ, ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಪಡಿಸಿದ ನಂತರ, ಅದನ್ನು ಜಾರಿಗೊಳಿಸಲು ಯಾವುದೇ ಡಿಕ್ರಿಯೇ ಉಳಿಯುವುದಿಲ್ಲ. ಆದ್ದರಿಂದ, ಅಮಲ್ದಾರಿ ನ್ಯಾಯಾಲಯಕ್ಕೆ (Executing Court) ಗೋಡೆಯ ಮೌಲ್ಯ ನಿಗದಿಪಡಿಸಿ ಪರಿಹಾರಧನ ನೀಡುವಂತೆ ನಿರ್ದೇಶಿಸುವ ಅಧಿಕಾರವಿಲ್ಲ ಎಂದು ತಿಳಿಸಿತು.

ಇದಲ್ಲದೆ, ಹೈಕೋರ್ಟ್ ಎರಡನೇ ಮೇಲ್ಮನವಿಯನ್ನು ನಿರ್ಧರಿಸುವಾಗ ಸಿಪಿಸಿ ಸೆಕ್ಷನ್ 100 ರ ಪ್ರಕಾರ ಅಗತ್ಯವಿರುವ ಪ್ರಮುಖ ಕಾನೂನು ಪ್ರಶ್ನೆಗಳನ್ನು ಸರಿಯಾಗಿ ರೂಪಿಸದೆ, ಕೆಳಗಿನ ನ್ಯಾಯಾಲಯಗಳ ಏಕರೂಪದ ತೀರ್ಮಾನಗಳನ್ನು ಬದಲಾಯಿಸಿರುವುದನ್ನೂ ಸುಪ್ರೀಂ ಕೋರ್ಟ್ ಗಮನಿಸಿತು.

ಹೈಕೋರ್ಟ್ ವಾದ ಪತ್ರದಲ್ಲಿ ಕೋರದ ಪರಿಹಾರವನ್ನು ಸೃಷ್ಟಿಸಿ, ವಾದಿಯ ವಾರಸುದಾರರನ್ನು ಹಣದ ಪರಿಹಾರ ಸ್ವೀಕರಿಸಲು ಬಲವಂತಪಡಿಸಿರುವುದು ನ್ಯಾಯದ ವಿಫಲತೆಗೆ ಕಾರಣವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿ, ಹೈಕೋರ್ಟ್ ಸಾಮಾನ್ಯ ತೀರ್ಪನ್ನು ರದ್ದುಪಡಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.