ವಿಧವೆಯ ಪಿತ್ರಾರ್ಜಿತ ಆಸ್ತಿ ಹಕ್ಕು: ಮಹತ್ವದ ತೀರ್ಪು ಪ್ರಕಟಿಸಿದ ಸುಪ್ರೀಂ ಕೋರ್ಟ್
ನವದೆಹಲಿ: ‘ಆಸ್ತಿಯನ್ನು ಮಾರಾಟ ಮಾಡುವ ಒಪ್ಪಂದವು ಮಾಲೀಕತ್ವದ ಹಕ್ಕುಗಳನ್ನು ವರ್ಗಾಯಿಸುವುದಿಲ್ಲ ಅಥವಾ ನಿರ್ದಿಷ್ಟ ಆಸ್ತಿಯನ್ನು ಖರೀದಿಸಲು ಮುಂದಾಗಿರುವವರಿಗೂ ಆ ಆಸ್ತಿಯ ಮೇಲೆ ಯಾವುದೇ ಅಧಿಕಾರ ನೀಡುವುದಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ಬಾಂಬೆ ಹೈಕೋರ್ಟ್ ತೀರ್ಪಿನ ವಿರುದ್ಧ ಜೊಹರಾಬಿ ಎಂಬ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ , ‘ಆಸ್ತಿಯನ್ನು ಮಾರಾಟ ಮಾಡುವ ಒಪ್ಪಂದವು ಮಾಲೀಕತ್ವದ ಹಕ್ಕುಗಳನ್ನು ವರ್ಗಾಯಿಸುವುದಿಲ್ಲ. ‘ಮೃತ ವ್ಯಕ್ತಿಗೆ ಸೇರಿದ ಎಲ್ಲಾ ಸ್ವತ್ತುಗಳು ಮುಸ್ಲಿಂ ಕಾನೂನಿನ ಪ್ರಕಾರ ಹಂಚಬೇಕಾದ ಪಿತ್ರಾರ್ಜಿತ ಆಸ್ತಿಯ ಭಾಗವಾಗಿರುತ್ತವೆ’ ಎಂದು ತೀರ್ಪು ಪ್ರಕಟಿಸಿದೆ.
ಮೃತಪಟ್ಟ ಚಾಂದ್ ಖಾನ್ ಅವರಿಗೆ ಸೇರಿದ ಆಸ್ತಿಗಳಿಗೆ ಸಂಬಂಧಿಸಿದ ಕೌಟುಂಬಿಕ ವಿವಾದ ಇದಾಗಿದ್ದು, ಚಾಂದ್ ಖಾನ್ – ಅರ್ಜಿದಾರೆ ಜೊಹರಾಬಿ ದಂಪತಿಗೆ ಮಕ್ಕಳಿರಲಿಲ್ಲ. ವಿಧವೆ ಜೊಹರಾಬಿ ಅವರು ‘ಚಾಂದ್ ಖಾನ್ ಅವರ ಆಸ್ತಿಯು ಮುಸ್ಲಿಂ ಕಾನೂನಿನಡಿ ಪಿತ್ರಾರ್ಜಿತ ಆಸ್ತಿಯಾಗಿದೆ. ಆಸ್ತಿಯ ಮುಕ್ಕಾಲು ಭಾಗ ತಮಗೆ ಸೇರಬೇಕು’ ಎಂದು ವಾದಿಸಿದ್ದಾರೆ.
ಆದರೆ, ಜೊಹರಾಬಿ ಅವರ ವಾದವನ್ನು ತಳ್ಳಿಹಾಕಿದ ಚಾಂದ್ ಖಾನ್ ಅವರ ಸಹೋದರ ಇಮಾಮ್ ಖಾನ್, ‘ಚಾಂದ್ ಖಾನ್ ಅವರ ಜೀವಿತಾವಧಿಯಲ್ಲಿ ಆಸ್ತಿಗಳ ಮಾರಾಟದ ಒಪ್ಪಂದದ ಮೂಲಕ ಮೂರನೇ ವ್ಯಕ್ತಿಗೆ ವರ್ಗಾಯಿಸಲಾಗಿದೆ’ ಎಂಬ ವಾದವನ್ನು ಮುಂದಿಟ್ಟರು.
‘ಚಾಂದ್ ಖಾನ್ ಅವರ ಮರಣದ ನಂತರವೇ ಮಾರಾಟ ಒಪ್ಪಂದದ ಪತ್ರಗಳನ್ನು ಕಾರ್ಯಗತಗೊಳಿಸಲಾಗಿರುವುದರಿಂದ, ಅವರ ಮರಣದ ಸಮಯದಲ್ಲಿ ಆಸ್ತಿ ಅವರ ಬಳಿಯೇ ಇತ್ತು. ಆದ್ದರಿಂದ ಅದನ್ನು ಪಿತ್ರಾರ್ಜಿತ ಆಸ್ತಿ ಎಂದೇ ಪರಿಗಣಿಸಬೇಕು’ ಎಂದು ನ್ಯಾಯಪೀಠ ಜೊಹರಾಬಿ ಪರ ತೀರ್ಪು ನೀಡಿತು
ಅನುವಾದದಲ್ಲಿ ಲೋಪ: ನ್ಯಾಯಪೀಠ ಅಸಮಾಧಾನ:
ವಿಚಾರಣಾ ನ್ಯಾಯಾಲಯದ ಆದೇಶದ ಇಂಗ್ಲಿಷ್ ಅನುವಾದದಲ್ಲಿ ಹಲವು ಲೋಪಗಳು ಇರುವುದರ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಮೇಲ್ಮನವಿಯ ವಿಚಾರಣೆಯಲ್ಲಿ ನ್ಯಾಯಯುತ ತೀರ್ಪನ್ನು ಖಚಿತಪಡಿಸಿಕೊಳ್ಳಲು ಅನುವಾದವು ಮೂಲ ಪಠ್ಯದ ಅರ್ಥ ಮತ್ತು ಸಾರಾಂಶವನ್ನು ಸರಿಯಾಗಿ ಹಿಡಿದಿಡಬೇಕು ಎಂದು ಹೇಳಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
