ಸರ್ಕಾರಿ ನೌಕರರ ಸಂಘ ಸೇರಿ ಯಾವುದೇ ಸೇವಾ ಸಂಘಗಳಿಗೆ ವಾಣಿಜ್ಯ ಚಟುವಟಿಕೆಗೆ ನಿರ್ಬಂಧ:
ಬೆಂಗಳೂರು: ಸರ್ಕಾರಿ ನೌಕರರ ಸಂಘ ಸೇರಿ ಯಾವುದೇ ಸೇವಾ ಸಂಘಗಳಿಗೆ ವಾಣಿಜ್ಯ ಚಟುವಟಿಕೆಗೆ ನಿರ್ಬಂಧ ವಿಧಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಕರ್ನಾಟಕ ನಾಗರಿಕ ಸೇವಾ (ಸೇವಾ ಸಂಘಗಳ ಮಾನ್ಯತೆ) ನಿಯಮಗಳು 2015ಕ್ಕೆ ತಿದ್ದುಪಡಿ ಮಾಡುವ ಸಲುವಾಗಿ ನಿಯಮಗಳ ಕರಡನ್ನು ಕರ್ನಾಟಕ ಸರ್ಕಾರ ರಾಜ್ಯ ಪತ್ರದಲ್ಲಿ ಪ್ರಕಟಿಸಿದ್ದು, ಸರ್ಕಾರಿ ನೌಕರರ ಸಂಘ ಸಹಿತ ಯಾವುದೇ ಸೇವಾ ಸಂಘಗಳು ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳಲ್ಲಿ ಭಾಗಿಯಾಗತಕ್ಕದ್ದಲ್ಲ ಎಂದು ನಿರ್ಬಂಧ ವಿಧಿಸಿದೆ.
ಕರ್ನಾಟಕ ರಾಜ್ಯ ಸರಕಾರವು ಅಧಿಸೂಚನೆ ಸಂಖ್ಯೆ: ಸಿಆಸುಇ 13 ಸಹಿಮ ದಿನಾಂಕ 18.02.2026 ಪ್ರಕಾರ ಕರ್ನಾಟಕ ರಾಜ್ಯ ನಾಗರಿಕ ಸೇವಾ ಅಧಿನಿಯಮ, 1978 (1990 ರ ಕರ್ನಾಟಕ ಅಧಿನಿಯಮ 14) 8ನೇ ಪ್ರಕರಣದೊಂದಿಗೆ ಓದಲಾದಂತೆ, 3ನೇ ಪ್ರಕರಣದ (1)ನೇ ಉಪ-ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಈ ಅಧಿಪತ್ರವನ್ನು ಪ್ರಕಟಿಸಲಾಗಿದೆ. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘವನ್ನು ಒಳಗೊಂಡಂತೆ ರಾಜ್ಯಾದ್ಯಂತ ಸ್ಥಾಪಿಸಲ್ಪಟ್ಟ ವಿವಿಧ ಇಲಾಖೆಗಳ ನೌಕರರ ಸಂಘಗಳು, ಪದವೃಂದ ನೌಕರರ ಸಂಘಗಳಿಗೆ ಸಂಘದ ಕಾರ್ಯ ಚಟುವಟಿಕೆಗಳಿಗೆ ಹಾಗೂ ನೌಕರರಿಗೆ ಅನುಕೂಲಕರ ವಾಗುವ ದೃಷ್ಟಿಯಲ್ಲಿ ಸರ್ಕಾರದಿಂದ ಮಂಜೂರಾದ, ಅವಧಿ ಗೇಣಿಗೆ ನೀಡಲಾದ ಭೂಮಿಯಲ್ಲಿ ನೌಕರರಿಗೆ ಉಪಯುಕ್ತ ಕಾರ್ಯ ಚಟುವಟಿಕೆಗಳನ್ನು ಹೊರತುಪಡಿಸಿ ವಾಣಿಜ್ಯ ಕಟ್ಟಡ ನಿರ್ಮಿಸಿ ವಾಣಿಜ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ.
ಸದರಿ ಕರಡನ್ನು ಅಧಿಕೃತ ರಾಜ್ಯಪತ್ರದಲ್ಲಿ ಪುಕಟಗೊಂಡ ದಿನಾಂಕದಿಂದ ಹದಿನೈದು ದಿನಗಳ ನಂತರ ಪರಿಗಣನೆಗೆ ತೆಗೆದುಕೊಳ್ಳಲಾಗು ಎಂದು ಈ ಮೂಲಕ ಸೂಚಿಸಲಾಗಿದೆ. ಸದರಿ ಕರಡು ನಿಯಮಗಳಿಗೆ ಸಂಬಂಧಿಸಿದಂತೆ ಮೇಲೆ ಗೊತ್ತುಪಡಿಸಿದ ಅವಧಿ ಕೊನೆಗೊಳ್ಳುವ ಮುಂಚೆ ಯಾರೇ ವ್ಯಕ್ತಿಯಿಂದ ರಾಜ್ಯ ಸರ್ಕಾರವು ಸ್ವೀಕರಿಸಬಹುದಾದ ಯಾವುದೇ ಆಕ್ಷೇಪಣೆ ಅಥವಾ ಸಲಹೆಯನ್ನು ರಾಜ್ಯ ಸರ್ಕಾರವು ಪರಿಗಣಿಸುತ್ತದೆ.
ರಾಜ್ಯ ಸರ್ಕಾರ ಹೊರಡಿಸಿರುವ ಕರಡು ನಿಯಮಗಳು ಹೀಗಿವೆ
1. ಶೀರ್ಷಿಕೆ ಮತ್ತು ಪ್ರಾರಂಭ:-
(1) ಈ ನಿಯಮಗಳನ್ನು ಕರ್ನಾಟಕ ನಾಗರಿಕ ಸೇವಾ (ಸೇವಾ ಸಂಘಗಳ ಮಾನ್ಯತೆ) (ತಿದ್ದುಪಡಿ) ನಿಯಮಗಳು, 2026 ಎಂದು ಕರೆಯತಕ್ಕದ್ದು.
(2) ಅಧಿಕೃತ ರಾಜ್ಯಪತ್ರದಲ್ಲಿ ಅಂತಿಮವಾಗಿ ಪ್ರಕಟಗೊಂಡ ನಿಯಮಗಳು ದಿನಾಂಕದಿಂದ ಜಾರಿಗೆ ಬರತಕ್ಕದು.
2 ನಿಯಮ 4ಕ್ಕೆ ತಿದ್ದುಪಡಿ:- ಕರ್ನಾಟಕ ನಾಗರಿಕ ಸೇವಾ (ಸೇವಾ ಸಂಘಗಳ ಮಾನ್ಯತೆ) ನಿಯಮಗಳು, 2015ರ ನಿಯಮ 4ರಲ್ಲಿ, ಖಂಡ (16)ರ ನಂತರ ಈ ಕೆಳಕಂಡಂತೆ ಸೇರಿಸತಕ್ಕದ್ದು. “(17) ಸೇವಾ ಸಂಘವು ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳಲ್ಲಿ ಭಾಗಿಯಾಗತಕ್ಕದ್ದಲ್ಲ.”
ಕರ್ನಾಟಕ ರಾಜ್ಯ ಸೇವಾ ಸಂಘಗಳ ನಿಯಮಗಳು ಮುಖ್ಯವಾಗಿ ಕರ್ನಾಟಕ ನಾಗರಿಕ ಸೇವೆಗಳು (ಸೇವಾ ಸಂಘಗಳ ಮಾನ್ಯತೆ) ನಿಯಮಗಳು, 2015 ಮೂಲಕ ನಿಯಂತ್ರಿಸಲ್ಪಡುತ್ತವೆ. ಈ ನಿಯಮಗಳ ಪ್ರಕಾರ, ಸಂಘಗಳು ಸಾಮಾನ್ಯ ಹಿತಾಸಕ್ತಿಗಳನ್ನು ಪ್ರತಿನಿಧಿಸಬೇಕು, ಸರ್ಕಾರೇತರ ಸದಸ್ಯರನ್ನು ಹೊರತುಪಡಿಸಬೇಕು, ಜಾತಿ/ಧರ್ಮ ಆಧಾರಿತವಾಗಿ ರಚನೆಗೊಳ್ಳಬಾರದು ಮತ್ತು ಯಾವುದೇ ಪ್ರಕಟಣೆಗಳನ್ನು ಆರಂಭಿಸಲು ಮುಂಚಿತವಾಗಿ ಸರ್ಕಾರದ ಅನುಮೋದನೆ ಪಡೆಯಬೇಕು.
ಪ್ರತಿ ಕ್ಯಾಡರ್ ಗೆ ಒಂದೇ ಸಂಘಕ್ಕೆ ಮಾತ್ರ ಮಾನ್ಯತೆ ನೀಡಲಾಗುತ್ತದೆ ಮತ್ತು ನಡತೆ ನಿಯಮಗಳನ್ನು ಉಲ್ಲಂಘಿಸಿದರೆ ಅಥವಾ ಮುಷ್ಕರಗಳಲ್ಲಿ ತೊಡಗಿದರೆ ಮಾನ್ಯತೆ ಹಿಂತೆಗೆದುಕೊಳ್ಳಬಹುದು.
ಕರ್ನಾಟಕ ರಾಜ್ಯ ಸೇವಾ ಸಂಘಗಳಿಗೆ ಪ್ರಮುಖ ನಿಯಮಗಳು – ರಚನೆ ಮತ್ತು ಸದಸ್ಯತ್ವ:
ಸಂಘಗಳು ಸೇವೆಯಲ್ಲಿರುವ ಸರ್ಕಾರಿ ನೌಕರರಿಂದ ಮಾತ್ರ ಕೂಡಿರಬೇಕು.
ಸದಸ್ಯತ್ವವು ಸಾಮಾನ್ಯ ಹಿತಾಸಕ್ತಿಯುಳ್ಳ ನಿರ್ದಿಷ್ಟ ವರ್ಗದ ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಾಗಿರಬೇಕು.
ಜಾತಿ, ಧರ್ಮ ಅಥವಾ ವಂಶಾವಳಿ ಆಧಾರಿತ ರಚನೆ ನಿಷೇಧಿತವಾಗಿದೆ.
ಮಾನ್ಯತೆ ಪಡೆಯಲು ಸದಸ್ಯರು ಸಂಬಂಧಿತ ಕ್ಯಾಡರ್/ವರ್ಗದ ಕನಿಷ್ಠ 50% ಪ್ರತಿನಿಧಿಸಬೇಕು.
– ಮಾನ್ಯತೆ ಮತ್ತು ನಿರ್ಬಂಧಗಳು:
ಇಲಾಖೆಯ ಪ್ರತಿ ಕ್ಯಾಡರ್ಗೆ ಒಂದೇ ಸೇವಾ ಸಂಘಕ್ಕೆ ಮಾನ್ಯತೆ ನೀಡಲಾಗುತ್ತದೆ.
ಸರ್ಕಾರದ ಅನುಮತಿಯಿಲ್ಲದೆ ವಿದೇಶಿ ಪ್ರಾಧಿಕಾರಗಳೊಂದಿಗೆ ಸಂಘಗಳು ಸಂಪರ್ಕ ಸಾಧಿಸಲು ಸಾಧ್ಯವಿಲ್ಲ.
ಮುಂಚಿತ ಅನುಮತಿಯಿಲ್ಲದೆ ಯಾವುದೇ ಪ್ರಕಟಣೆಗಳು (ಪತ್ರಿಕೆಗಳು, ಬುಲೆಟಿನ್ ಗಳು) ಆರಂಭಿಸಲು ಸಾಧ್ಯವಿಲ್ಲ.
ಸಂಘಗಳು ಕರ್ನಾಟಕ ನಾಗರಿಕ ಸೇವೆಗಳು (ನಡೆ-ನುಡಿಗಳ) ನಿಯಮಗಳು, 2021 ಅನ್ನು ಉಲ್ಲಂಘಿಸಬಾರದು.
– ಕಾರ್ಯಾಚರಣಾ ನಿಯಮಗಳು:
ವ್ಯಕ್ತಿ ಸಂಬಂಧಿತ ಕ್ಯಾಡರ್ನಿಂದ ಹೊರಬಂದರೆ ಅವರ ಸದಸ್ಯತ್ವವು ಸ್ವಯಂಚಾಲಿತವಾಗಿ ರದ್ದುಪಡುತ್ತದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
