ರಕ್ಷಣೆ ಒದಗಿಸಲು ಆತ್ಮಸಾಕ್ಷಿ ಒಪ್ಪಲ್ಲ,: ಆರೋಪಿ ವಕೀಲರ ವಿರುದ್ದದ ಪ್ರಕರಣಕ್ಕೆ ತಡೆ ನೀಡಲು ಹೈಕೋರ್ಟ್ ನಕಾರ
ಬೆಂಗಳೂರು: ಬೆಂಗಳೂರಿನ ಜಿಮ್ ಟ್ರೈನರ್ ವಿಜಯ್ ಕುಮಾರ್ ಕೊಲೆಯ ಪ್ರಕರಣದಲ್ಲಿ ಏಳನೇ ಆರೋಪಿಯಾಗಿರುವ ವಕೀಲ ಬಿ. ಲೋಕೇಶ್ ವಿರುದ್ಧದ ಪ್ರಕರಣಕ್ಕೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಪ್ರಕರಣದ ರದ್ದುಪಡಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಪ್ರಕರಣ ರದ್ದುಪಡಿಸಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ, ಇಲ್ಲದಿದ್ದರೆ ಆದೇಶ ಮಾಡುತ್ತಿದೆ ಎಂದು ಹೇಳಿ ವಕೀಲರಿಗೆ ಜಾಮೀನು ಪಡೆಯಿರಿ ಎಂದು ಸೂಚಿಸಿತು.
ಪ್ರಕರಣದಿಂದ ತಮ್ಮನ್ನು ಕೈಬಿಡುವಂತೆ ಕೋರಿ ಲೋಕೇಶ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಲೇವಾರಿ ಮಾಡಿದ್ದು,ಕೊಲೆ ಪ್ರಕರಣದಲ್ಲಿ ನಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿ ಯಾವುದೇ ಆದೇಶ ಮಾಡುವುದಿಲ್ಲ. ಇಲ್ಲವಾದಲ್ಲಿ ಆದೇಶ ಮಾಡುತ್ತಿದ್ದೆ ಎಂದು ತಿಳಿಸಿ ಸಕ್ಷಮ ನ್ಯಾಯಾಲಯದಲ್ಲಿ ಜಾಮೀನು ಕೋರುವಂತೆ ನಿರ್ದೇಶನ ನೀಡಿತು.
ಲೋಕೇಶ್ ಪರ ವಾದ ಮಂಡಿಸಿದ ಹಿರಿಯ ವಕೀಲ ಡಿ ಆರ್ ರವಿಶಂಕರ್ ಅವರು “ಸಕ್ಷಮ ನ್ಯಾಯಾಲಯದಲ್ಲಿ ಜಾಮೀನು ಪಡೆಯುವವರೆಗೆ ರಕ್ಷಣೆ ಮುಂದುವರಿಸಬೇಕು” ಎಂದು ಮನವಿ ಮಾಡಿದರು. ಆದರೆ ಇದಕ್ಕೆ ನ್ಯಾಯಪೀಠವು ಸ್ಪಷ್ಟವಾಗಿ ನಿರಾಕರಿಸಿತು.
ವಕೀಲ ಲೋಕೇಶ್ ಮತ್ತು ಇತರೆ ಆರೋಪಿಗಳ ನಡುವಿನ ಹಣ ವರ್ಗಾವಣೆ ಕುರಿತು ಪೀಠವು “ಒಂದರಿಂದ ಐದನೇ ಆರೋಪಿಗಳು ಸುಫಾರಿ ಕೊಲೆಗಾರರಾಗಿರುವಾಗ ವಕೀಲರ ಖಾತೆಯಿಂದ ಅವರ ಖಾತೆಗೆ ಹಣ ಹೇಗೆ ಹೋಗುತ್ತದೆ?” ಎಂದು ಪ್ರಶ್ನಿಸಿತು.
ಜುಲೈ 6ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್, ಲೋಕೇಶ್ ವಿರುದ್ಧದ ಪ್ರಕರಣಕ್ಕೆ ತಡೆ ನೀಡಿತ್ತು. ಇಂದು ತುರ್ತು ವಿಚಾರಣೆಗೆ ಜಗದೀಶ್ ಅವರು ಅರ್ಜಿ ಸಲ್ಲಿಸಿದ್ದು, ತನಿಖೆಯಲ್ಲಿ ಸಾಕಷ್ಟು ಪ್ರಗತಿಯಾಗಿರುವುದನ್ನು ಪೀಠದ ಗಮನಕ್ಕೆ ತಂದರು. ಇದನ್ನು ಆಲಿಸಿದ ಪೀಠವು ವಕೀಲ ಲೋಕೇಶ್ ಅವರು ಸಕ್ಷಮ ನ್ಯಾಯಾಲಯದಲ್ಲಿ ಜಾಮೀನು ಕೋರುವುದು ಸೂಕ್ತ ಎಂದು ಸೂಚಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
