ಹೈಕೋರ್ಟ್ ನಲ್ಲಿ ನ್ಯಾಯಾಂಗ ಅಧಿಕಾರಿಯಿಂದ ಏರುಧ್ವನಿಯ ಮಾತು: ಸುಪ್ರೀಂಕೋರ್ಟ್ ತೀವ್ರ ತರಾಟೆ
ನವದೆಹಲಿ: ಹೈಕೋರ್ಟ್ ಕಲಾಪದ ಸಮಯದಲ್ಲಿ ಉದ್ವಿಗ್ನತೆಯಿಂದ ವರ್ತಿಸಿ, ಏರುಧ್ವನಿಯಲ್ಲಿ ಮಾತನಾಡಿದ್ದ ಆರೋಪ ಹೊತ್ತಿದ್ದ ನ್ಯಾಯಾಂಗ ಅಧಿಕಾರಿಯನ್ನು ಸುಪ್ರೀಂಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಮಹಾರಾಷ್ಟ್ರದ ಹಿರಿಯ ನ್ಯಾಯಾಂಗ ಅಧಿಕಾರಿ ದಿಲೀಪ್ ಎಸ್.ಘುಮಾರೆ ಅವರು ಮುಂಬೈ ಹೈಕೋರ್ಟ್ನ ಆದೇಶವನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್ ಕಲಾಪದ ಸಮಯದಲ್ಲಿ ಅವರು ಉದ್ವಿಗ್ನತೆಯಿಂದ ವರ್ತಿಸಿ, ಉನ್ನತ ನ್ಯಾಯಾಲಯದ ಆಡಳಿತವೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ವಿಫಲವಾಗಿದೆ ಎಂದು ಗೂಬೆ ಕೂರಿಸಿದ್ದರು ಎನ್ನುವುದು ಅವರ ವಿರುದ್ಧದ ಆರೋಪವಾಗಿದೆ.
ನ್ಯಾಯಮೂರ್ತಿಗಳಾದ ವಿಕ್ರಮನಾಥ್ ಮತ್ತು ಸಂದೀಪ್ ಮೆಹ್ರಾ ಅವರ ಪೀಠವು, ಹೈಕೋರ್ಟ್ ಕಲಾಪಗಳಲ್ಲಿ ಇಂತಹ ಆಕ್ರಮಣಕಾರಿ ಅಥವಾ ಕಿರುಚಾಡುವ ಧ್ವನಿಯಲ್ಲಿ ಮಾತನಾಡುವುದನ್ನು ತೀವ್ರವಾಗಿ ಖಂಡಿಸಿತು. ಯಾವುದೇ ನ್ಯಾಯಾಂಗ ಅಧಿಕಾರಿಯು ನ್ಯಾಯಾಧೀಶರ ಮುಂದೆ ಏರುಧ್ವನಿಯಲ್ಲಿ ಮಾತನಾಡುವಂತಿಲ್ಲ ಅಥವಾ ಮಂಜೂರಾದ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ವೈಫಲ್ಯಕ್ಕೆ ನ್ಯಾಯಾಲಯವೇ ಹೊಣೆ ಎಂದು ದೂಷಿಸುವಂತಿಲ್ಲ. ನ್ಯಾಯಾಲಯದ ಘನತೆಗೆ ಧಕ್ಕೆ ತರುವಂತಹ ವರ್ತನೆಯು ಗಂಭೀರ ಸ್ವರೂಪದ ಶಿಸ್ತುಭಂಗವಾಗಿದೆ ಎಂದು ಅದು ಅಭಿಪ್ರಾಯಪಟ್ಟಿದೆ.
ವಿವಾದವು 2013ರ ಆರ್ಟಿಐ ಕಾರ್ಯಕರ್ತ ವಿಹಾರ ದುರ್ವೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಳೆ ಭುಗಿಲೆದ್ದಿತ್ತು. ತ್ವರಿತ ನ್ಯಾಯಾಲಯಗಳಲ್ಲಿ ಹುದ್ದೆಗಳ ಸೃಷ್ಟಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅಫಿಡವಿಟ್ ನ ಸ್ಪಷ್ಟನೆಯ ವೇಳೆ ನ್ಯಾಯಾಲಯದ ತರಾಟೆಗೆ ಒಳಗಾದ ಘುಮಾರೆ, ನ್ಯಾಯಾಧೀಶರ ಮೇಲೆಯೇ ದೋಷಾರೋಪಣೆ ಮಾಡಿದ್ದರು. ಇದು ನ್ಯಾಯಾಲಯದ ನಿಂದನೆ ಅಡಿಯಲ್ಲಿ ಬರುತ್ತದೆ ಎಂದು ಹೈಕೋರ್ಟ್ ಗಂಭೀರವಾಗಿ ಪರಿಗಣಿಸಿತ್ತು.
ಇನ್ನು ಅರ್ಜಿದಾರರ ಪರ ಹಿರಿಯ ವಕೀಲ ವಿಕಾಸ್ ಸಿಂಗ್, ಘುಮಾರೆ ಈಗಾಗಲೇ ಬೇಷರತ್ ಕ್ಷಮೆಯಾಚಿಸಿದ್ದಾರೆ ಹಾಗೂ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅಲ್ಲದೆ, ಹೈಕೋರ್ಟ್ ಕಲಾಪಗಳ ವೀಡಿಯೊ ರೆಕಾರ್ಡಿಂಗ್ ಅನ್ನು ಪರಿಶೀಲಿಸುವಂತೆ ಮತ್ತು ನಕ್ಸಲ್ ಪೀಡಿತ ಪ್ರದೇಶಕ್ಕೆ ಅವರ ವರ್ಗಾವಣೆಯನ್ನು ಪ್ರಸ್ತಾಪಿಸಿ ವಿಚಾರಣೆಗೆ ತಡೆ ನೀಡುವಂತೆ ಕೋರಿದರು.
ಆದರೂ ಸುಪ್ರೀಂಕೋರ್ಟ್ ನ್ಯಾಯಪೀಠವು, ಹೈಕೋರ್ಟ್ ನಿರ್ಧಾರಕ್ಕೆ ತಡೆ ನೀಡಲು ನಿರಾಕರಿಸಿತು. ಆದರೆ ಪ್ರಕರಣದ ಮುಂದಿನ ತೀರ್ಪು ಬರುವವರೆಗೆ ಹೈಕೋರ್ಟ್ ಅಂತಿಮ ಆದೇಶ ಹೊರಡಿಸದಂತೆ ತಡೆಹಿಡಿದು, ಸೆಪ್ಟೆಂಬರ್ 28ಕ್ಕೆ ವಿಚಾರಣೆಯನ್ನು ಮುಂದೂಡಿತು. ಅಲ್ಲದೆ, ಹೈಕೋರ್ಟ್ಗೆ ಮರಳಿ ಬೇಷರತ್ ಕ್ಷಮೆಯಾಚಿಸುವಂತೆ ಘುಮಾರೆ ಅವರಿಗೆ ಸೂಚಿಸಿತು.
ಎಚ್ ಎನ್ ವೆಂಕಟೇಶ್
ಗೌರವ ಸಂಪಾದಕರು
ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
ಮೈಸೂರು
