23/04/2026

Law Guide Kannada

Online Guide

OPS ಮರುಜಾರಿಗೆ ಹೈಕೋರ್ಟ್ ಮೆಟ್ಟಿಲೇರಿದ ನ್ಯಾಯಾಧೀಶರು: ಅರ್ಜಿ ಅಂಗೀಕಾರ

ಉತ್ತರಾಖಂಡ್: ಹಳೆಯ ಪಿಂಚಣಿ ಯೋಜನೆ (OPS)ಯನ್ನು ಮರುಸ್ಥಾಪಿಸುವಂತೆ ಕೋರಿ ಉತ್ತರಾಖಂಡ್ ರಾಜ್ಯದ ಉನ್ನತ ನ್ಯಾಯಾಂಗ ಸೇವೆಯ 30 ಹಿರಿಯ ನ್ಯಾಯಾಂಗ ಅಧಿಕಾರಿಗಳು ಹೈಕೋರ್ಟ್ ಮೆಟ್ಟಿಲೇರಿದ್ದು ಅರ್ಜಿಯನ್ನು ವಿಚಾರಣೆಗೆ ಉತ್ತರಾಖಂಡ್ ಹೈಕೋರ್ಟ್ ಅಂಗೀಕರಿಸಿದೆ.

ಹಿರಿಯ ನ್ಯಾಯಾಂಗ ಅಧಿಕಾರಿ ಪ್ರತಿಭಾ ತಿವಾರಿ ಸೇರಿದಂತೆ ಹಲವಾರು ಅಧಿಕಾರಿಗಳು ಈ ರಿಟ್ ಅರ್ಜಿಯನ್ನು ಸಲ್ಲಿಸಿದ್ದು, ಮುಖ್ಯ ನ್ಯಾಯಮೂರ್ತಿ ಜಿ ನರೇಂದರ್ ಮತ್ತು ನ್ಯಾಯಮೂರ್ತಿ ಸುಭಾಷ್ ಉಪಾಧ್ಯಾಯ ಅವರಿದ್ದ ನ್ಯಾಯಪೀಠವು ಅರ್ಜಿಯನ್ನು ವಿಚಾರಣೆ ನಡೆಸಿ ರಾಜ್ಯದ ಸಿಬ್ಬಂದಿ ಕಾರ್ಯದರ್ಶಿ, ಹಣಕಾಸು ಕಾರ್ಯದರ್ಶಿ ಮತ್ತು ಖಜಾನೆ ನಿರ್ದೇಶಕರು ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎರಡು ವಾರಗಳಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸುವಂತೆ ನೋಟಿಸ್ ನೀಡಿದೆ.

ಪ್ರಾಂತೀಯ ನಾಗರಿಕ ನ್ಯಾಯಾಂಗ ಸೇವೆ (PCS-J) 2005 ರ ನೇಮಕಾತಿ ಪ್ರಕ್ರಿಯೆಯನ್ನು ಅಕ್ಟೋಬರ್ 1, 2005 ಕ್ಕಿಂತ ಮೊದಲು ಪ್ರಾರಂಭಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ನೇಮಕಾತಿ ಜಾಹೀರಾತಿನಲ್ಲಿಯೇ ಸೇವೆಯು ಪಿಂಚಣಿ ಪ್ರಯೋಜನಗಳನ್ನು ಒಳಗೊಂಡಿರುತ್ತದೆ ಎಂದು ಉಲ್ಲೇಖಿಸಲಾಗಿತ್ತು. ಇದರ ಆಧಾರದ ಮೇಲೆ, ಸರ್ಕಾರವು ಆರಂಭದಲ್ಲಿ ಈ ಅಧಿಕಾರಿಗಳನ್ನು ಹಳೆಯ ಪಿಂಚಣಿ ಯೋಜನೆ (OPS) ಅಡಿಯಲ್ಲಿ ಒಳಗೊಳ್ಳುವಂತೆ ಪರಿಗಣಿಸಿ ಅದಕ್ಕೆ ಸೇರಲು ಅವರಿಗೆ ಆಯ್ಕೆಯನ್ನು ನೀಡಿತು. ಎಲ್ಲಾ 30 ಮಂದಿ ಆಯ್ಕೆ ಮಾಡಿಕೊಂಡರು.

ಆದಾರೂ ನಂತರ ಸರ್ಕಾರವು ಯಾವುದೇ ಮಾನ್ಯ ಆಧಾರವಿಲ್ಲದೆ ಅವರನ್ನು ಔPS ನಿಂದ ಹೊರಗಿಡಲು “ಅಸಮಂಜಸ ಮತ್ತು ತರ್ಕಬದ್ಧವಲ್ಲದ” ನಿರ್ಧಾರವನ್ನು ತೆಗೆದುಕೊಂಡಿತು ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಕೇಂದ್ರ ಸರಕಾರವು ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯಾಯಾಂಗ ಅಧಿಕಾರಿಗಳಿಗೆ ಸಂಬಂಧಿಸಿದಂತೆ ಏಕರೂಪಿ ಏಕೀಕೃತ ಪಿಂಚಣಿ ಯೋಜನೆಯನ್ನು (UPS)ಅನುಷ್ಠಾನಕ್ಕೆ ತರುವ ಅಭಿಪ್ರಾಯ ಹೊಂದಿದ್ದು ಈ ವಿಚಾರವನ್ನು ಅಖಿಲ ಭಾರತ ನ್ಯಾಯಾಂಗ ಅಧಿಕಾರಿಗಳ ಸಂಘ ವಿರುದ್ಧ ಭಾರತ ಸರಕಾರ ಈ ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಸಮಕ್ಷಮ ಮಂಡಿಸಲಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.