ನ್ಯಾಯಾಂಗ ವಿಶ್ವಾಸಾರ್ಹತೆಗೆ ಧಕ್ಕೆ ಗಂಭೀರ ಅಪರಾಧ: ಲಂಚ ಪ್ರಕರಣದ ಆರೋಪಿ ಜಾಮೀನು ಅರ್ಜಿ ತಿರಸ್ಕರಿಸಿದ ಕೋರ್ಟ್
ಪಂಜಾಬ್: ನ್ಯಾಯಾಧೀಶರ ಮೇಲೆ ಪ್ರಭಾವ ಬೀರಿ ಅನುಕೂಲಕರ ನ್ಯಾಯಾಂಗ ಆದೇಶಗಳನ್ನು ಪಡೆಯಿಸಿಕೊಡುತ್ತೇವೆ ಎಂದು ಸುಳ್ಳು ಭರವಸೆ ನೀಡಿ ಅಪಾರ ಪ್ರಮಾಣದ ಹಣವನ್ನು ಪಡೆದುಕೊಂಡಿರುವ ಆರೋಪವು ಗಂಭೀರ ಸ್ವರೂಪದ್ದಾಗಿದ್ದು ಇದು ನ್ಯಾಯಾಂಗ ವಿಶ್ವಾಸಾರ್ಹತೆಗೆ ಧಕ್ಕೆ ತಂದಂತೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಸುಮಾರು 28.5 ಲಕ್ಷ ರೂ. ಹಣವನ್ನು ಮೋಸದಿಂದ ವಸೂಲಿ ಮಾಡಿದ ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನ ನ್ಯಾಯಮೂರ್ತಿ ವಿನೋದ್ ಎಸ್. ಭಾರದ್ವಾಜ್ ಅವರಿದ್ದ ನ್ಯಾಯಪೀಠ, ನ್ಯಾಯಾಂಗದ ಮೇಲೆ ಪ್ರಭಾವವಿದೆ ಎಂದು ತೋರಿಸಿ ವ್ಯಾಜ್ಯಗಾರರನ್ನು ವಂಚಿಸುವುದು ಗಂಭೀರ ಅಪರಾಧ. ನ್ಯಾಯಾಧೀಶರ ಮೇಲೆ ಪ್ರಭಾವ ಬೀರಿ ಅನುಕೂಲಕರ ನ್ಯಾಯಾಂಗ ಆದೇಶಗಳನ್ನು ಪಡೆಯಿಸಿಕೊಡುತ್ತೇವೆ ಎಂದು ಸುಳ್ಳು ಭರವಸೆ ನೀಡಿ ಗಣನೀಯ ಪ್ರಮಾಣದ ಹಣವನ್ನು ಪಡೆದುಕೊಂಡಿರುವ ಆರೋಪವು ಗಂಭೀರ ಸ್ವರೂಪದ್ದಾಗಿದೆ. ಇದು ನ್ಯಾಯಾಂಗ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ನಂಬಿಕೆಗೆ ಧಕ್ಕೆ ಉಂಟುಮಾಡುತ್ತದೆ ಎಂದಿದೆ.
ಪ್ರಕರಣದಲ್ಲಿ ಮಾಡಲಾದ ಆರೋಪಗಳು ಮೇಲ್ನೋಟಕ್ಕೆ ವ್ಯಾಜ್ಯಗಾರರನ್ನು ಗುರಿಯಾಗಿಸಿಕೊಂಡು ರೂಪಿಸಲಾದ ಸುಸಂಘಟಿತ ಅಪರಾಧ ಸಂಚನ್ನು ಬಯಲಿಗೆಳೆಯುತ್ತವೆ ಎಂದು ಹೇಳಿದ ನ್ಯಾಯಪೀಠ, ಬಿಎನ್ಎಸ್ಎಸ್ ಸೆಕ್ಷನ್ 483ರ ಅಡಿಯಲ್ಲಿ ಸಲ್ಲಿಸಲಾದ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.
ಅರ್ಜಿದಾರನ ವಿರುದ್ಧ ಮಾಡಲಾಗಿರುವ ಆರೋಪಗಳ ಗಂಭೀರತೆ ಮತ್ತು ತೀವ್ರತೆಯನ್ನು ಪರಿಗಣಿಸಿದಾಗ, ಜಾಮೀನು ನೀಡಲು ಇದು ಸೂಕ್ತ ಪ್ರಕರಣವಲ್ಲ. ಮೇಲ್ನೋಟಕ್ಕೆ, ಅನುಮಾನಿಸದ ವ್ಯಾಜ್ಯಗಾರರಿಂದ ನ್ಯಾಯಾಂಗದ ಮೇಲೆ ಪ್ರಭಾವ ಬೀರಿ ಮತ್ತು ಕಾನೂನುಬಾಹಿರ ಮಾರ್ಗಗಳ ಮೂಲಕ ಅನುಕೂಲಕರ ಆದೇಶಗಳನ್ನು ಪಡೆಸಿಕೊಡುತ್ತೇವೆ ಎಂದು ಸುಳ್ಳು ಭರವಸೆ ನೀಡಿ ದೊಡ್ಡ ಮೊತ್ತದ ಹಣವನ್ನು ಪಡೆಯುವ ಉದ್ದೇಶದಿಂದ ರೂಪಿಸಲಾದ ಸಂಚು ಎಂಬುದು ಕಂಡುಬರುತ್ತದೆ. ಇಂತಹ ಆರೋಪಗಳು ಸಾಬೀತಾದರೆ, ಅವು ನ್ಯಾಯ ನಿರ್ವಹಣೆಯ ಮೇಲಿನ ಸಾರ್ವಜನಿಕ ನಂಬಿಕೆಯ ಅಡಿಪಾಯವನ್ನೇ ಅಲುಗಾಡಿಸುತ್ತವೆ.” ಎಂದು ಆತಂಕ ವ್ಯಕ್ತಪಡಿಸಿತು.
ಏನಿದು ಪ್ರಕರಣ..
ಪ್ರಕರಣವು 3 ಡಿಸೆಂಬರ್ 2021ರಂದು ಹರಿಯಾಣದ ಪಲ್ಟಾಲ್ ಜಿಲ್ಲೆಯ ಬಹಿನ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420, 406, 467, 468, 471 2 120-22 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ದೂರುದಾರ ಗಜರಾಜ್ ಅವರು, 2019 ರಿಂದ 2021ರ ಅವಧಿಯಲ್ಲಿ ಮುಖ್ಯ ಆರೋಪಿ ಮಿಧುನ್ ಕೌಶಿಕ್, ಅವನ ತಂದೆ ರಾಜೇಂದ್ರ ಕೌಶಿಕ್ ಹಾಗೂ ನ್ಯಾಯಾಂಗ ಸಂಪರ್ಕಗಳಿವೆ ಎಂದು ಹೇಳಿಕೊಂಡಿದ್ದ ಕಿರಣ್ ಎಂಬ ಮಹಿಳೆ ಸೇರಿ ಹಲವರು ತಮ್ಮ ನಿವೃತ್ತ ಸರ್ಕಾರಿ ಪಟ್ಟಾರಿ ತಂದೆಗೆ ಸೇವಾ ಸೌಲಭ್ಯಗಳನ್ನು ದೊರಕಿಸಿಕೊಡಲು ಮತ್ತು ಹೈಕೋರ್ಟ್ ನ್ಯಾಯಾಧೀಶರ ಮೇಲೆ ಪ್ರಭಾವ ಬೀರಿ ಅನುಕೂಲಕರ ಆದೇಶಗಳನ್ನು ಪಡೆಯಿಸಿಕೊಡಲು ಸಾಧ್ಯವೆಂದು ಸುಳ್ಳು ಹೇಳಿ ತಮ್ಮಿಂದ ದೊಡ್ಡ ಮೊತ್ತದ ಹಣ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದರು.
ಅರ್ಜಿದಾರನಾದ ಚಾಲಕನು ಹಲವು ಸಂದರ್ಭಗಳಲ್ಲಿ ಮುಖ್ಯ ಆರೋಪಿ ಮಿಥುನ್ ಕೌಶಿಕ್ ಜೊತೆಗೆ ಹೋಗಿ ದೂರುದಾರರಿಂದ ಹಣ ಸಂಗ್ರಹಿಸಿದ್ದಾನೆ ಹಾಗೂ ಅನುಕೂಲಕರ ನ್ಯಾಯಾಲಯದ ಆದೇಶಗಳನ್ನು ಪಡೆಸಿಕೊಡಲಾಗುವುದು ಎಂದು ಪುನಃ ಪುನಃ ಭರವಸೆ ನೀಡಿದ್ದಾನೆ ಎಂಬ ಆರೋಪವೂ ಇದೆ.
ಈವರೆಗೆ 11 ಸಾಕ್ಷಿದಾರರನ್ನು ವಿಚಾರಣೆ ಮಾಡಲಾಗಿದ್ದು, ಗಂಭೀರ ಅಪರಾಧಗಳಿಗೆ ಸಂಬಂಧಿಸಿದಂತೆ ಆರೋಪಗಳನ್ನು ರೂಪಿಸಿದ ನಂತರ ಪ್ರಕರಣವನ್ನು ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿದೆ ಎಂದು ನ್ಯಾಯಾಲಯ ಗಮನಿಸಿತು. ಅರ್ಜಿಯಲ್ಲಿ ಯಾವುದೇ ಅರ್ಹತೆ ಕಂಡುಬರದ ಕಾರಣ ಅದನ್ನು ತಿರಸ್ಕರಿಸಲಾಯಿತು.
“ನ್ಯಾಯ ಸಂಸ್ಥೆಯ ಮಾನ್ಯತೆ ಮತ್ತು ಶಕ್ತಿ ಸಾಮಾನ್ಯ ನಾಗರಿಕರು ಅದರ ಮೇಲೆ ಇಡುವ ವಿಶ್ವಾಸದಿಂದಲೇ ಬರುತ್ತದೆ. ಇಂತಹ ಕೃತ್ಯಗಳನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ಅವು ಸಂಸ್ಥೆಯ ಪ್ರತಿಷ್ಠೆಗೆ ಧಕ್ಕೆ ತಂದು ಕಾನೂನಿನ ಆಳ್ವಿಕೆಯ ಮೇಲಿನ ಸಾರ್ವಜನಿಕರ ವಿಶ್ವಾಸವನ್ನು ದುರ್ಬಲಗೊಳಿಸುತ್ತವೆ.” ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
