ಡಿಕ್ರಿ ಪಾಲಿಸದ ಕಾರಣಕ್ಕೆ ಏಕಾಏಕಿ ಜೈಲು ಶಿಕ್ಷೆ: ಆದೇಶ ರದ್ದುಗೊಳಿಸಿದ ಹೈಕೋರ್ಟ್
ಮುಂಬೈ: ಡಿಕ್ರಿಯನ್ನು ಪಾಲಿಸದ ಕಾರಣಕ್ಕೆ ಒಂದು ಕುಟುಂಬದ ನಾಲ್ವರು ಸದಸ್ಯರಿಗೆ ಏಕಾಏಕಿ ಒಂದು ತಿಂಗಳ ಸಿವಿಲ್ ಜೈಲು ಶಿಕ್ಷೆ ವಿಧಿಸಿದ್ದ ನಾಂದೇವಿನ ಸಿವಿಲ್ ನ್ಯಾಯಾಲಯದ ಆದೇಶವನ್ನು ರದ್ದು ಮಾಡಿದ ಬಾಂಬೆ ಹೈಕೋರ್ಟ್, ಡಿಕ್ಕಿ ಜಾರಿಗೆ ಮುನ್ನ ತೀರ್ಪು ಋಣಿಗೆ ನೋಟೀಸ್ ನೀಡುವುದು, ತಕರಾರಿಗೆ ಅವಕಾಶ ನೀಡುವುದು ಅಗತ್ಯ ಎಂದು ಅಭಿಪ್ರಾಯಪಟ್ಟಿದೆ.
ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿ ಸಿದ್ಧೇಶ್ವರ ಥೋಂಬೈ ಅವರಿದ್ದ ಔರಂಗಾಬಾದ್ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ. 2023ರ ಏಪ್ರಿಲ್ 18ರಂದು ಪುರ್ಭಾ ಮತ್ತು ದಾಮು ಧುಟ್ಟ ಹಾಗೂ ಅವರ ಸಹೋದರ ಸಂಬಂಧಿಗಳಾದ ಭಗವಾನ್ ಮತ್ತು ಸುಮನ್ ಧುಟ್ಟ ವಿರುದ್ಧ ನೀಡಿದ್ದ ಆದೇಶವನ್ನು ರದ್ದುಪಡಿಸಿದ ನ್ಯಾಯಪೀಠವು, ತೀರ್ಪು ಋಣಿಗೆ ನೋಟಿಸ್ ನೀಡದೆ ಅಥವಾ ವಿಚಾರಣೆಯ ಅವಕಾಶ ನೀಡದೆ ಡಿಕ್ರಿಯನ್ನು ಉದ್ದೇಶಪೂರ್ವಕ ಪಾಲಿಸದ ಕಾರಣ ತೀರ್ಪು ಋಣಿಯವರನ್ನು ಸಿವಿಲ್ ಜೈಲಿಗೆ ಕಳುಹಿಸಲಾಗುವುದಿಲ್ಲ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.
ಧುಟ್ಟ ಸಹೋದರ ಸಂಬಂಧಿಗಳಿಗೆ ಮೊಹಮ್ಮದ್ ಜಾಫರ್ ಶೇಖ್ ಇಸ್ಮಾಯಿಲ್ ಮತ್ತು ಅವರ ಕುಟುಂಬದೊಂದಿಗೆ 2002ರಿಂದ ದೀರ್ಘಕಾಲದ ಸಿವಿಲ್ ತಕರಾರು ಇತ್ತು. ನಂತರ, 2004ರ ಮೇ 25ರಂದು ಸಿವಿಲ್ ನ್ಯಾಯಾಲಯವು ಇಸ್ಮಾಯಿಲ್ ಕುಟುಂಬದ ಪರವಾಗಿ ಮತ್ತು ಧುಟ್ಟ ಸಹೋದರ ಸಂಬಂಧಿಗಳ ವಿರುದ್ಧ ಡಿಕ್ರಿ ನೀಡಿತು.
ಆದರೆ, ನಂತರ ಧುಟ್ಟ ಸಹೋದರ ಸಂಬಂಧಿಗಳು ಡಿಕ್ರಿಯನ್ನು ಪಾಲಿಸದ ಹಿನ್ನೆಲೆಯಲ್ಲಿ, ಇಸ್ಮಾಯಿಲ್ ಕುಟುಂಬವು ನ್ಯಾಯಾಲಯದ ಮುಂದೆ ಅಮಲ್ಜಾರಿ ದಾವೆಯನ್ನು ದಾಖಲಿಸಿದರು. ಡಿಕ್ರಿ ಜಾರಿಗೊಳಿಸುವ ನ್ಯಾಯಾಲಯವು ಡಿಕ್ರಿಯ ಉಲ್ಲಂಘನೆಯ ವಿಷಯ ಗಮನಿಸಿ, 2023ರ ಏಪ್ರಿಲ್ 18ರಂದು ಧುಟ್ಟ ಸಹೋದರ ಸಂಬಂಧಿಗಳನ್ನು ಒಂದು ತಿಂಗಳ ಕಾಲ ಸಿವಿಲ್ ಜೈಲಿನಲ್ಲಿ ಬಂಧಿಸಲು ಆದೇಶಿಸಿತು.
ಈ ಆದೇಶವನ್ನು ಪ್ರಶ್ನಿಸಿ, ಧುಟ್ಟ ಸಹೋದರ ಸಂಬಂಧಿಗಳು, ತಮ್ಮ ವಿರುದ್ಧ ಪ್ರಕ್ರಿಯೆ ಆರಂಭಿಸಿರುವ ಬಗ್ಗೆ ಯಾವುದೇ ನೋಟಿಸ್ ನೀಡದೆ ಕಾರ್ಯನಿರ್ವಹಣಾ ನ್ಯಾಯಾಲಯವು ಸಹಜ ನ್ಯಾಯತತ್ವಗಳನ್ನು ಪಾಲಿಸಿಲ್ಲ ಎಂದು ವಾದಿಸಿದರು.
ಇತ್ತ, 2004ರ ಮೇನಲ್ಲಿ ಡಿಕ್ಕಿ ನೀಡಿದ ನಂತರವೂ ಧುಟ್ಟ ಸಹೋದರ ಸಂಬಂಧಿಗಳು ಉದ್ದೇಶಪೂರ್ವಕವಾಗಿ ಅದನ್ನು ಪಾಲಿಸದೆ ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಅವಮಾನಿಸಿದ್ದಾರೆ ಎಂದು ಇಸ್ಮಾಯಿಲ್ ಕುಟುಂಬವೂ ಕೂಡ ವಾದಿಸಿತು. ಆದರೆ, ನ್ಯಾಯಮೂರ್ತಿ ಥೋಂಬ್ರೆ ಅವರು ಧುಟ್ಟ ಸಹೋದರ ಸಂಬಂಧಿಗಳ ವಾದವನ್ನು ಒಪ್ಪಿ, ಇಂತಹ ಕಠಿಣ ಆದೇಶ ನೀಡುವ ಮೊದಲು ನ್ಯಾಯಾಲಯವು ಅಮಲ್ದಾರಿ ಪ್ರಕರಣದಲ್ಲಿ ತೀರ್ಪು ಋಣಿಗಳಿಗೆ ನೋಟಿಸ್ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.
“ಡಿಕ್ರಿ ಜಾರಿಗೊಳಿಸುವ ನ್ಯಾಯಾಲಯವು ತೀರ್ಪು ಬಾಕಿದಾರರಿಗೆ ನೋಟಿಸ್ ನೀಡದೇ ಅಥವಾ ವಿಚಾರಣೆಯ ಅವಕಾಶ ನೀಡದೇ ಆಕ್ಷೇಪಾರ್ಹ ಆದೇಶವನ್ನು ನೀಡಿದೆ ಎಂಬುದನ್ನು ಗಮನಿಸಿದ ನ್ಯಾಯಪೀಠವು, ವೈಯಕ್ತಿಕ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವಂತಹ ಆದೇಶವು ಸಹಜ ನ್ಯಾಯತತ್ತ್ವಗಳಿಗೆ ಸ್ಪಷ್ಟವಾದ ಉಲ್ಲಂಘನೆಯಾಗಿದೆ. ಡಿಕ್ರಿಯ ಉಲ್ಲಂಘನೆ ನಡೆದಿದೆ ಎಂದು ಊಹಿಸಿದರೂ, ಸಂಬಂಧಿತ ತೀರ್ಪು ಬಾಕಿದಾರರಿಗೆ ನೋಟಿಸ್ ನೀಡಬೇಕು ಹಾಗೂ ಸಿವಿಲ್ ಜೈಲಿಗೆ ಬಂಧಿಸುವ ಮೊದಲು ಅವರ ವಿವರಣೆ ಕೇಳಬೇಕು. ಈ ಕಡ್ಡಾಯ ಕ್ರಮವನ್ನು ಅನುಸರಿಸದಿರುವುದು ಆಕ್ಷೇಪಾರ್ಹ ಆದೇಶವನ್ನು ಅಸ್ಥಿರಗೊಳಿಸುತ್ತದೆ. ಆದ್ದರಿಂದ, ಅರ್ಜಿಯನ್ನು ಅನುಮೋದಿಸಲು ನಾನು ಮುಂದಾಗಿದ್ದೇನೆ,” ಎಂದು ನ್ಯಾಯಮೂರ್ತಿ ಹೇಳಿದರು.
ಇಸ್ಮಾಯಿಲ್ ಕುಟುಂಬವು ಆರಂಭಿಸಿದ ಅಮಲ್ಜಾರಿ ಪ್ರಕರಣದ ಪ್ರಕ್ರಿಯೆಗಳನ್ನು ಕಾನೂನಿನ ಪ್ರಕಾರ ಪುನಃ ನಿರ್ಧರಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಹೈಕೋರ್ಟ್ ನಿರ್ದೇಶಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
