ಸೂಕ್ತ ಕಾಲಮಿತಿಯೊಳಗೆ ದಾಖಲಿಸದ ‘PTCL’ ಪ್ರಕರಣಗಳು ಕಾನೂನುಬದ್ಧವಾಗಿ ನಿಲ್ಲುವುದಿಲ್ಲ- ಡಿಸಿ ಆದೇಶ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು : ಸೂಕ್ತ ಕಾಲಮಿತಿಯೊಳಗೆ ದಾಖಲಿಸದ ‘ಪಿಟಿಸಿಎಲ್ ’ ಪ್ರಕರಣಗಳು ಕಾನೂನುಬದ್ಧವಾಗಿ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಕರ್ನಾಟಕ ಹೈಕೋರ್ಟ್, ದಶಕಗಳ ಬಳಿಕ ಸಲ್ಲಿಕೆಯಾಗಿದ್ದ ಪಿಟಿಸಿಎಲ್ ಅರ್ಜಿ ಪುರಸ್ಕರಿಸಿದ್ದ ಆದೇಶ ಎತ್ತಿಹಿಡಿದಿದ್ದ ಜಿಲ್ಲಾಧಿಕಾರಿಗಳ ಆದೇಶವನ್ನು ರದ್ದುಗೊಳಿಸಿದೆ.
ಜಿಲ್ಲಾಧಿಕಾರಿಗಳ ಆದೇಶ ಪ್ರಶ್ನಿಸಿ ಬೆಂಗಳೂರು ಉತ್ತರದ ಯಲಹಂಕ ತಾಲೂಕಿನ ತರಹುಣಸೆ ಗ್ರಾಮದ ಟಿ. ಪಿ. ಗೋಪಾಲಪ್ಪ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಸ್. ಆರ್. ಕೃಷ್ಣಕುಮಾರ್ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ಜಮೀನು ಪರಭಾರೆಯಾದ ಬರೋಬ್ಬರಿ 43 ವರ್ಷಗಳ ನಂತರ ಪರಿಶಿಷ್ಟ ಜಾತಿಗಳ(ಕೆಲವು ಜಮೀನುಗಳ ಪರಭಾರೆ ನಿಷೇಧ) ಕಾಯಿದೆ ಅಡಿಯಲ್ಲಿ ದಾಖಲಾಗಿದ್ದ ಮನವಿಯನ್ನು ಪುರಸ್ಕರಿಸಿದ್ದ ಉಪ ವಿಭಾಗಾಧಿಕಾರಿಗಳು ಪುರಸ್ಕರಿಸಿದ್ದರು. ಈ ಆದೇಶವನ್ನು ಎತ್ತಿಹಿಡಿದಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶವನ್ನು ಇದೀಗ ಹೈಕೋರ್ಟ್ ನ್ಯಾಯಪೀಠವು ರದ್ದುಗೊಳಿಸಿ ಆದೇಶಿಸಿದೆ.
ಪಿಟಿಸಿಎಲ್ ಕಾಯಿದೆ ಕುರಿತು ‘ನೆಕ್ಕಂಟಿ ರಾಮಲಕ್ಷ್ಮಿ’ ಮತ್ತು ‘ವಿವೇಕ್ ಹಿಂದೂಜಾ’ ಪ್ರಕರಣಗಳ ತೀರ್ಪು ಮತ್ತು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನೀಡಿರುವ ಈ ಹಿಂದಿನ ಆದೇಶಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ಸಾಕಷ್ಟು ವಿಳಂಬವಾಗಿ ದಾವೆ ಹೂಡಲಾಗಿದೆ. ಆದ್ದರಿಂದ, ಜಿಲ್ಲಾಧಿಕಾರಿಗಳ ಆದೇಶ ಕಾನೂನು ಬಾಹಿರ. ಸೂಕ್ತ ಕಾಲಮಿತಿಯೊಳಗೆ ದಾಖಲಿಸದ ಪಿಟಿಸಿಎಲ್ ಪ್ರಕರಣಗಳು ಕಾನೂನುಬದ್ಧವಾಗಿ ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿತು.
ಏನಿದು ಪ್ರಕರಣ..
ಬೆಂಗಳೂರಿನ ಯಲಹಂಕ ತಾಲೂಕಿನ ತರಹುಣಸೆ ಗ್ರಾಮದ ಜಮೀನಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವರ್ಗಕ್ಕೆ ಸೇರಿದ್ದ ಮುನಿಲಕ್ಷ್ಮಮ್ಮ ಮತ್ತು ರಾಜಣ್ಣ ಎಂಬುವವರು ಸರ್ಕಾರದಿಂದ ಮಂಜೂರಾಗಿದ್ದ ಜಮೀನು ಮಾರಾಟವಾದ 43 ವರ್ಷಗಳು ಮತ್ತು ಪಿಟಿಸಿಎಲ್ ಕಾಯಿದೆ ಜಾರಿಯಾದ 37 ವರ್ಷಗಳ ಬಳಿಕ ಅಂದರೆ, 2017ರಲ್ಲಿ ಉಪವಿಭಾಗಾಧಿಕಾರಿಗಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.ಈಗಾಗಲೇ ಮಾರಾಟವಾಗಿರುವ ಭೂಮಿಯನ್ನು ಮತ್ತೆ ತಮ್ಮ ಹೆಸರಿಗೆ ಪುನರ್ ಸ್ಥಾಪನೆ ಮಾಡಬೇಕು ಎಂದು ಮನವಿ ಮಾಡಿದ್ದರು.
ಈ ಅರ್ಜಿಗಳ ಪರಿಗಣಿಸಿದ್ದ ಉಪವಿಭಾಗಾಧಿಕಾರಿಗಳು ಜಮೀನಿನ ಹಕ್ಕುಗಳನ್ನು ಮರುಸ್ಥಾಪನೆಗೆ ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಜಮೀನಿನ ಖರೀದಿದಾರರು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗಳ ಆದೇಶವನ್ನು ಎತ್ತಿಹಿಡಿದಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು.
ಹೈಕೋರ್ಟ್ ನಲ್ಲಿ ವಿಚಾರಣೆ ವೇಳೆ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಈ ಭೂಮಿಯ ಮೂಲ ಮಂಜೂರುದಾರರು ದಶಕಗಳ ಹಿಂದೆಯೇ ಭೂಮಿಯನ್ನು ಮಾರಾಟ ಮಾಡಿದ್ದಾರೆ. ಜಮೀನು ಹಸ್ತಾಂತರವಾಗಿ 43 ವರ್ಷಗಳು ಹಾಗೂ ಪಿಟಿಸಿಎಲ್ ಕಾಯ್ದೆ ಜಾರಿಗೆ ಬಂದು 37 ವರ್ಷಗಳು ಕಳೆದ ನಂತರ ಅರ್ಜಿದಾರರು ಅರ್ಜಿ ಸಲ್ಲಿಸಿದ್ದಾರೆ. ಆದರೆ, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ಕಾಲಮಿತಿಯ ನಿಯಮವನ್ನು ನಿರ್ಲಕ್ಷಿಸಿ ಆದೇಶಿಸಿದ್ದು, ಆದೇಶವನ್ನು ರದ್ದುಮಾಡಬೇಕು ಎಂದು ಮನವಿ ಮಾಡಿದ್ದರು.
ಮನವಿ ಪುರಸ್ಕರಿಸಿದ ನ್ಯಾಯಪೀಠವು ಡಿಸಿ ಮತ್ತು ಎಸಿ ಅವರ ಆದೇಶಗಳನ್ನು ರದ್ದುಗೊಳಿಸಿ, ಇಡೀ ಪ್ರಕ್ರಿಯೆಯನ್ನು ವಜಾಗೊಳಿಸಿದೆ. ಜತೆಗೆ, ಪ್ರಕರಣವನ್ನು ಕೈಬಿಡಲು ಉಭಯ ಪಕ್ಷಕಾರರು ಜಿಲ್ಲಾಧಿಕಾರಿಗಳ ಮುಂದೆ ಜಂಟಿ ಜ್ಞಾಪನಾ ಪತ್ರ ಸಲ್ಲಿಸಿದ್ದಾರೆ. ಆದರೂ ಜಿಲ್ಲಾಧಿಕಾರಿಗಳು ಆದೇಶವನ್ನು ನೀಡಿರುವುದನ್ನು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
