03/07/2026

Law Guide Kannada

Online Guide

ವಿಚಾರಣೆ ಆರಂಭಿಸದೆ ನೌಕರನ ಅಮಾನತು: ಅರು ತಿಂಗಳಿಗಿಂತ ಹೆಚ್ಚು ಕಾಲ ಮುಂದುವರಿಕೆ ಸಾಧ್ಯವಿಲ್ಲ- ಹೈಕೋರ್ಟ್

ಬೆಂಗಳೂರು: ಆರು ತಿಂಗಳ ಅವಧಿ ಮುಗಿದ ಬಳಿಕವೂ ಯಾವುದೇ ಇಲಾಖಾ ವಿಚಾರಣೆಯು ಆರೋಪಪಟ್ಟಿಯ ಮೂಲಕ ಆರಂಭವಾಗದಿದ್ದರೇ ಕಾನೂನಿನ ಪ್ರಕಾರ ನೌಕರನ ಅಮಾನತು ಸ್ವಯಂಚಾಲಿತವಾಗಿ ರದ್ದಾಗುವುದು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.

ಶಂಕರ್ ಯಮನಪ್ಪ ತಳವಾರ್ ವಿರುದ್ಧ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಕಾರ್ಯನಿರ್ವಹಣಾ ಸದಸ್ಯರು, ಕೆಐಎಡಿಬಿ ಹಾಗೂ ಇತರರು ಈ ಪ್ರಕರಣದಲ್ಲಿ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ಶ್ರೀ ನಾಗಪ್ರಸನ್ನ ಅವರಿದ್ದ ಪೀಠವು ಮಹತ್ವದ ತೀರ್ಪು ನೀಡಿದೆ

ಆರೋಪಪಟ್ಟಿ ಅಥವಾ ಔಪಚಾರಿಕ ಶಿಸ್ತು ಕ್ರಮವನ್ನು ಪ್ರಾರಂಭಿಸದಿದ್ದರೆ, ನೌಕರನ ಅಮಾನತು ಆರು ತಿಂಗಳಿಗಿಂತ ಹೆಚ್ಚು ಕಾಲ ಅನಿರ್ದಿಷ್ಟವಾಗಿ ಮುಂದುವರಿಯಲು ಸಾಧ್ಯವಿಲ್ಲ. ದೀರ್ಘಕಾಲದ ಅಮಾನತು ಶಿಕ್ಷೆಯಾಗಿರುತ್ತದೆ ಮತ್ತು ಅಧಿಕಾರಿಗಳು ಆಡಳಿತಾತ್ಮಕ ಜಡತ್ವದ ಮೂಲಕ ನೌಕರರನ್ನು “ಒಡೆಯರಂತೆ” ನಡೆಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ರಿಟ್ ಅರ್ಜಿದಾರರಿಗೆ ಸೇವಾ ನಿಯೋಜನೆ ನೀಡುವಂತೆ ಆಜ್ಞಾಪಕ ಆದೇಶ (ಮ್ಯಾಂಡಮಸ್) ಹೊರಡಿಸುವ ವೇಳೆ, ಯಾವುದೇ ಆರೋಪಪಟ್ಟಿ ನೀಡದೆ ಅಮಾನತನ್ನು ಅನಿರ್ದಿಷ್ಟಾವಧಿಗೆ ವಿಸ್ತರಿಸುವ ಮೂಲಕ ನೌಕರರನ್ನು “ಚರಾಸ್ತಿ” ಗಳಂತೆ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ. ಇಂತಹ ನಡೆ ಸೇವಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಕರ್ನಾಟಕ ಸಿವಿಲ್ ಸರ್ವೀಸಸ್ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ ತಿದ್ದುಪಡಿ ಮಾಡಲಾದ ನಿಯಮ 10(5)(b) ಅನ್ನು ವ್ಯಾಖ್ಯಾನಿಸಿದ ನ್ಯಾಯಾಲಯ, ಪ್ರಾರಂಭಿಕ ಆರು ತಿಂಗಳ ಅವಧಿ ಮುಗಿದ ದಿನಾಂಕದಿಂದಲೇ ಅಮಾನತು “ಕಾನೂನುಬದ್ಧವಾಗಿ ರದ್ದಾದಂತಾಗಿದೆ” (ಡೀಮ್ ರದ್ದತಿ) ಎಂದು ಘೋಷಿಸಿತು. ದೀರ್ಘಕಾಲದ ಅಮಾನತಿನ ವಿರುದ್ಧ ಕಾನೂನಿನಲ್ಲಿ ನೀಡಿರುವ ರಕ್ಷಣಾತ್ಮಕ ಕ್ರಮಗಳು ಕೇವಲ ಆಚರಣೆಯ ವಿಧಿಗಳು ಅಲ್ಲ: ಅವು ಕಟ್ಟುನಿಟ್ಟಿನ ಕಾನೂನುಬದ ಆದೇಶಗಳಾಗಿವೆ ಎಂದು ತಿಳಿಸಿತು.

ಅರ್ಜಿದಾರರಾದ ಶಂಕರ್ ಯಮನಪ್ಪ ತಳವಾರ, ಕೆಐಎಡಿಬಿಯ ಹಿರಿಯ ಸಹಾಯಕರಾಗಿದ್ದು, ಹಣಕಾಸು ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ 19 ಡಿಸೆಂಬರ್ 2022ರಂದು ಅಮಾನತುಗೊಳಿಸಲ್ಪಟ್ಟಿದ್ದರು. ಎರಡು ವರ್ಷಕ್ಕಿಂತ ಹೆಚ್ಚು ಕಾಲ ಕಳೆದರೂ ಮಂಡಳಿ ಆರೋಪಪಟ್ಟಿ ಸಲ್ಲಿಸದೇ, ಇಲಾಖಾ ವಿಚಾರಣೆ ಆರಂಭಿಸದೇ ಇದ್ದಿತು. ಅರ್ಜಿದಾರರು 2023ರ ಜೂನ್ನಲ್ಲಿ ಅಮಾನತು ರದ್ದುಪಡಿಸಲು ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ನಂತರ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದರು. ನ್ಯಾಯಾಲಯವು ಸುಮಾರು 30 ತಿಂಗಳ ವಿಳಂಬಕ್ಕೆ ಸ್ಪಷ್ಟನೆ ಕೇಳಿದ ನಂತರ ಮಾತ್ರ ಕೆಐಎಡಿಬಿ 2025ರ ಎಪ್ರಿಲ್ನಲ್ಲಿ ಆರೋಪಪಟ್ಟಿ ನೀಡಿತು. ಮಂಡಳಿ, ಸಿಐಡಿ ತನಿಖೆ ಬಾಕಿ ಇದೆ ಮತ್ತು ಅಪರಾಧ ಮೊಕದ್ದಮೆ ಹೂಡುವ ಅನುಮತಿ ಬೇಕಾಗಿದೆ ಎಂಬ ಕಾರಣಗಳನ್ನು ಮುಂದಿಟ್ಟಿತು. ನ್ಯಾಯಾಲಯ ಗಮನಿಸಿದಂತೆ, ನಿಯಮ 10(5)(ಬಿ) ಅನ್ನು ತಿದ್ದುಪಡಿ ಮಾಡಿದ ಉದ್ದೇಶವೇ ಆರೋಪಪಟ್ಟಿ ನೀಡದಿದ್ದರೆ ಅಮಾನತನ್ನು ಆರು ತಿಂಗಳಿಗಷ್ಟೇ ಮಿತಿಗೊಳಿಸುವ “ಡೀಮಿಂಗ್ ಕ್ಲಾಸ್” ಅನ್ನು ಸೇರಿಸುವುದಾಗಿತ್ತು. ಮಂಡಳಿ ಈ ನಿಯಮವನ್ನು ಕಾನೂನುಬದ್ಧ ಕರ್ತವ್ಯವನ್ನಾಗಿ ನೋಡದೇ ಕೇವಲ ಔಪಚಾರಿಕತೆಯಾಗಿ ಪರಿಗಣಿಸಿದೆ ಎಂದು ಪೀಠ ಅಭಿಪ್ರಾಯಪಟ್ಟಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.