ಸಾಮಾನ್ಯ ವರ್ಗದ ಹುದ್ದೆಗಳು ಎಲ್ಲ ಕೆಟಗರಿಯ ಅಭ್ಯರ್ಥಿಗಳಿಗೂ ದೊರೆಯಲಿ- ಸುಪ್ರೀಂಕೋರ್ಟ್ ತೀರ್ಪು
ನವದೆಹಲಿ: ಮುಕ್ತ’ ಮೀಸಲಾತಿ ಇಲ್ಲದ’ ಅಥವಾ ‘ಸಾಮಾನ್ಯ’ ಎಂದು ವರ್ಗೀಕರಿಸಲಾದ ಹುದ್ದೆಗಳು ಯಾವುದೇ ನಿರ್ದಿಷ್ಟ ಜಾತಿ, ವರ್ಗ ಅಥವಾ ಲಿಂಗಕ್ಕೆ ಮೀಸಲಾಗಿಲ್ಲ. ಸಾಮಾನ್ಯ ವರ್ಗದ ಹುದ್ದೆಗಳು ಎಲ್ಲ ಕೆಟಗರಿಯ ಅಭ್ಯರ್ಥಿಗಳಿಗೆ ಅರ್ಹತೆಯ ಆಧಾರದ ಮೇಲೆ ದೊರೆಯಲಿ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
ರಾಜಸ್ಥಾನ ನ್ಯಾಯಾಲಯದ ಸಿಬ್ಬಂದಿ ನೇಮಕಾತಿ ಕುರಿತು ರಾಜಸ್ಥಾನ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ದೀಪಂಕರ್ ದತ್ತ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರ ಪೀಠವು, ಸಾಮಾನ್ಯ ವರ್ಗದ ಹುದ್ದೆಗಳು ಎಲ್ಲ ಅಭ್ಯರ್ಥಿಗಳಿಗೆ ಅರ್ಹತೆಯ ಆಧಾರದ ಮೇಲೆ ದೊರೆಯಬೇಕು. ಉತ್ತಮ ಸಾಧನೆಯೊಂದಿಗೆ ಜನರಲ್ ಕೆಟಗರಿಯಲ್ಲಿ ಸ್ಥಾನ ಪಡೆವ ಅಭ್ಯರ್ಥಿಗಳಿಗೆ ಮೀಸಲಾತಿ ಅಡಿಯಲ್ಲಿ ಹುದ್ದೆಗಳನ್ನು ನೀಡುವುದು, ಅವರನ್ನು ಮೀಸಲಾತಿ ಕೆಟಗರಿಗೆ ತಳ್ಳುವುದು ಸರಿಯಲ್ಲ. ಅವರಿಗೆ, ಸಾಮಾನ್ಯ ವರ್ಗದಲ್ಲಿಯೇ ಹುದ್ದೆಗಳು ದೊರೆಯಬೇಕು. ಮೀಸಲು ವರ್ಗದ ಅರ್ಹ ಅಭ್ಯರ್ಥಿಗಳನ್ನು ‘ಸಾಮಾನ್ಯ ವರ್ಗ’ದಲ್ಲಿಯೇ ಪರಿಗಣಿಸುಂತೆ ಸೂಚಿಸಿದೆ.
ನೇಮಕಾತಿಗಳಲ್ಲಿ ಸಾಮಾನ್ಯ ವರ್ಗದ ಕಟ್-ಆಫ್ ಗಿಂತ ಹೆಚ್ಚಿನ ಅಂಕಗಳನ್ನು ಗಳಿಸಿದ್ದರೆ, ಅರ್ಹ ಮೀಸಲಾತಿ ವರ್ಗದ ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಹಂತದಲ್ಲಿ ಸಾಮಾನ್ಯ ವರ್ಗದಿಂದ ಹೊರಗಿಡಲಾಗದು. ಅವರನ್ನು ಸಾಮಾನ್ಯ ಕೆಟಗರಿಯಲ್ಲೇ ನೇಮಕಾತಿ ಮಾಡಿಕೊಳ್ಳಬೇಕು ಎಂದು ಹೇಳಿದೆ. ರಾಜಸ್ತಾನದ ನ್ಯಾಯಾಲಯದ ನೇಮಕಾತಿಯಲ್ಲಿ ಅರ್ಹತಾ ಪಟ್ಟಿಗಳನ್ನು ಪುನನಿರ್ಮಿಸುವಂತೆ ಸೂಚಿಸಿದೆ.
ಮೀಸಲಾತಿ ಅಡಿಯಲ್ಲಿ ಬರುವ ಅಭ್ಯರ್ಥಿಗಳೂ ಅವರ ಉತ್ತಮ ಸಾಧನೆ ಮತ್ತು ಅರ್ಹತೆಯ ಆಧಾರದಲ್ಲಿ ಸಾಮಾನ್ಯ ವರ್ಗದ ಖಾಲಿ ಹುದ್ದೆಗಳ ನೇಮಕಾತಿಗೆ ಸ್ಪರ್ಧಿಸಬಹುದು. ಈ ಹುದ್ದೆಗಳು ಎಲ್ಲರಿಗೂ ಮುಕ್ತವಾಗಿದೆ. ಸಾಮಾನ್ಯ ವರ್ಗವನ್ನು ಮೀಸಲಾತಿ ಇಲ್ಲದ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಉದ್ದೇಶಿಸಲಾದ ವಿಭಾಗವೆಂದು ಪರಿಗಣಿಸಬಾರದು. ಹಾಗೆ ಪರಿಗಣಿಸಿದರೆ, ಅದು 14 ಮತ್ತು 16 ನೇ ವಿಧಿಗಳ ಅಡಿಯಲ್ಲಿ ಸಮಾನತೆಯ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸುತ್ತದೆ” ಎಂದು ನ್ಯಾಯಪೀಠ ಒತ್ತಿ ಹೇಳಿದೆ.
ಪ್ರಕರಣದ ಹಿನ್ನೆಲೆ..
ರಾಜಸ್ಥಾನ ಹೈಕೋರ್ಟ್, ಜಿಲ್ಲಾ ನ್ಯಾಯಾಲಯಗಳು ಹಾಗೂ ಸಂಬಂಧಿತ ಸಂಸ್ಥೆಗಳಲ್ಲಿ 2,756 ಜೂನಿಯರ್ ಜುಡಿಷಿಯಲ್ ಅಸಿಸ್ಟೆಂಟ್/ಕ್ಲರ್ಕ್ ಗ್ರೇಡ್-II ಹುದ್ದೆಗಳಿಗೆ 2022ರ ಆಗಸ್ಟ್ ನಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ಹುದ್ದೆಗಳನ್ನು ವರ್ಗವಾರು ವರ್ಗೀಕರಿಸಿದರೂ, ಲಿಖಿತ ಪರೀಕ್ಷೆಯಲ್ಲಿ ನಿಗದಿತ ಕನಿಷ್ಠ (ಕಟ್-ಆಫ್) ಅಂಕಗಳನ್ನು ಗಳಿಸುವ ಅಭ್ಯರ್ಥಿಗಳನ್ನು ಎರಡನೇ ಹಂತಕ್ಕೆ ಐದು ಪಟ್ಟು ಹೆಚ್ಚು ಖಾಲಿ ಹುದ್ದೆಗಳವರೆಗೆ ಶಾರ್ಟ್ಲಿಸ್ಟ್ ಮಾಡಲಾಗುವುದು ಎಂದು ಜಾಹೀರಾತಿನಲ್ಲಿ ಷರತ್ತು ವಿಧಿಸಿತ್ತು. ಆದಾಗ್ಯೂ, 2023ರ ಮೇ ತಿಂಗಳಿನಲ್ಲಿ ಫಲಿತಾಂಶವನ್ನು ಘೋಷಿಸಿದಾಗ, ಪರಿಶಿಷ್ಟ ಜಾತಿಗಳು (SC), ಇತರ ಹಿಂದುಳಿದ ಜಾತಿ (ಕ್ರೀಮಿಲೇಯರ್), ಅತ್ಯಂತ ಹಿಂದುಳಿದ ವರ್ಗ ಮತ್ತು ಆರ್ಥಿಕವಾಗಿ ದುರ್ಬಲ ವರ್ಗ (EWS) ಸೇರಿದಂತೆ ಮೀಸಲು ವರ್ಗಗಳ ಕಟ್-ಆಫ್ ಅಂಕಗಳು ಸಾಮಾನ್ಯ ವರ್ಗದ ಕಟ್-ಆಫ್ ಗಿಂತ ಹೆಚ್ಚಿದೆ ಎಂದು ತಿಳಿದುಬಂದಿತ್ತು. ಈ ಗೊಂದಲದ ಕಟ್-ಆಫ್ ಅಂಕಗಳಿಂದಾಗಿ, ಸಾಮಾನ್ಯ ವರ್ಗದ ಕಟ್-ಆಫ್ ಗಿಂತ ಹೆಚ್ಚು ಅಂಕಗಳನ್ನು ಗಳಿಸಿದ, ಆದರೆ, ಆಯಾ ಮೀಸಲು ವರ್ಗಗಳಿಗೆ ನಿಗದಿಪಡಿಸಿದ ಕಟ್-ಆಫ್ ಗಿಂತ ಕಡಿಮೆ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳನ್ನು ಟೈಪ್ ರೈಟಿಂಗ್ ಪರೀಕ್ಷೆಗೆ ಅರ್ಹತೆ ಪಡೆಯುವ ಅಭ್ಯರ್ಥಿಗಳ ಪಟ್ಟಿಯಿಂದ ಹೊರಗಿಡಲಾಗಿತ್ತು.
ಮೀಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳು ತಾವು ಅನೇಕ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗಿಂತ ಹೆಚ್ಚು ಅಂಕ ಪಡೆದು ಅರ್ಹತೆ ಹೊಂದಿದ್ದರೂ, ತಮ್ಮನ್ನು ಮೀಸಲು ವರ್ಗಗಳಿಗೆ ಸೀಮಿತಗೊಳಿಸಿ, ಅನ್ಯಾಯ ಎಸಲಾಗಿದೆ ಎಂದು ಹೈಕೋರ್ಟ್ ಮೊರೆ ಹೋಗಿದ್ದರು.
ಇವರ ಮನವಿಯನ್ನು ಅಂಗೀಕರಿಸಿದ ಹೈಕೋರ್ಟ್, ಅರ್ಹ ಮೀಸಲು ವರ್ಗದ ಅಭ್ಯರ್ಥಿಗಳು ಯಾವುದೇ ವಿಶೇಷ ರಿಯಾಯಿತಿಯನ್ನು ಪಡೆಯದಿದ್ದರೆ, ಮೊದಲು ಅವರನ್ನು ‘ಸಾಮಾನ್ಯ ವರ್ಗ’ದಲ್ಲಿ ಪರಿಗಣಿಸಬೇಕು ಎಂದು ತೀರ್ಪು ಪ್ರಕಟಿಸಿ. ಅರ್ಹತಾ ಪಟ್ಟಿಗಳ ಪರಿಷ್ಕರಣೆ ಮಾಡುವಂತೆ ಸೂಚನೆ ನೀಡಿತು. ಆದರೆ, ಆಡಳಿತವು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ, ಸುಪ್ರೀಂ ಕೋರ್ಟ್ ಕೂಡ ಮೀಸಲು ವರ್ಗದ ಅರ್ಹ ಅಭ್ಯರ್ಥಿಗಳನ್ನು ‘ಸಾಮಾನ್ಯ ವರ್ಗ’ದಲ್ಲಿಯೇ ಪರಿಗಣಿಸುಂತೆ ಸೂಚನೆ ನೀಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
