ಪರಭಾರೆ ನಿಷೇಧ ಅವಧಿ ಮುನ್ನ ಕರಾರು ಕಾನೂನು ಪ್ರಕಾರ ಊರ್ಜಿತವೇ..?
ಬೆಂಗಳೂರು: ಪರಭಾರೆ ನಿಷೇಧ ಅವಧಿ ಮುನ್ನ ಕರಾರು ಕಾನೂನು ಪ್ರಕಾರ ಊರ್ಜಿತವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಎಚ್. ಪಿ. ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದ್ದು, ಪರಭಾರೆ ನಿಷೇಧ ಅವಧಿ ಮುಗಿಯುವ ಮೊದಲೇ ಸ್ಥಿರಾಸ್ತಿಯ ಮಾರಾಟ ಕ್ರಯ ಪತ್ರ ಮಾಡಿಕೊಳ್ಳಲಾಗುವುದು ಎಂಬ ಒಕ್ಕಣೆ ಇರುವ ಮಾರಾಟ ಕರಾರು ಪತ್ರವು ಕಾನೂನು ಪ್ರಕಾರ ಊರ್ಜಿತ ಎಂದು ತೀರ್ಪಿನಲ್ಲಿ ತಿಳಿಸಿದೆ.
“ಸೈಯದ್ ಜಹೀರ್ ಮತ್ತಿತರರು ವಿರುದ್ಧ ಸಿ.ವಿ. ಸಿದ್ದವೀರಪ್ಪ” ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ನೀಡಿದ (2010 KAR 765) ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಎರಡೂ ವಿಚಾರಣಾ ನ್ಯಾಯಾಲಯಗಳ ತೀರ್ಪನ್ನು ಬದಿಗಿರಿಸಿ, ಅರ್ಜಿದಾರ ವಾದಿ ಪರವಾಗಿ ಪ್ರಕರಣವನ್ನು ಡಿಕ್ರಿ ಮಾಡಿತು.
ಪರಭಾರೆ ನಿಷೇಧ ಇದ್ದರೂ ಮಾರಾಟ ಒಪ್ಪಂದ ಕ್ರಯ ಪತ್ರವು ಕರ್ನಾಟಕ ಭೂ ಮಸೂದೆ ಕಾಯ್ದೆ 1961ರ ಸೆಕ್ಷನ್ 61ರ ಪ್ರಕಾರ ಉಲ್ಲಂಘನೆಯಲ್ಲ. ಏಕೆಂದರೆ, ಇಲ್ಲಿ ಆಸ್ತಿಯ ವರ್ಗಾವಣೆ ಆಗುವುದಿಲ್ಲ. ಅದೇ ರೀತಿ, ಭಾರತೀಯ ಒಪ್ಪಂದ ಕಾಯ್ದೆ 1872ರ ಸೆಕ್ಷನ್ 23ರ ಪ್ರಕಾರ ಅನೂರ್ಜಿತ ಒಪ್ಪಂದವಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಪುಟ್ಟಶೆಟ್ಟಿ ಎಂಬುವವರು ಬಿ.ಎಸ್. ಲಕ್ಷ್ಮಣನ್ ಅವರೊಂದಿಗೆ 2020ರ ಏಪ್ರಿಲ್ 29ರಂದು ಮಾರಾಟ ಕರಾರು ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದದ ಪ್ರಕಾರ 1997ರಲ್ಲಿ ತಮಗೆ ಮಂಜೂರಾದ ಜಮೀನನ್ನು ಪರಭಾರೆ ನಿಷೇಧದ ಅವಧಿಯ ಬಳಿಕ ಮಾರಾಟ ಮಾಡುವುದಾಗಿ ಭರವಸೆ ನೀಡಿದ್ದು, ಮಾರಾಟ ಒಪ್ಪಂದದ ಪೂರ್ಣ ಮೊತ್ತವಾದ ರೂ. 1,06,000/-ನ್ನು ಪಡೆದುಕೊಂಡಿದ್ದರು.
ಈ ಒಪ್ಪಂದದಲ್ಲಿ ಸದರಿ ಆಸ್ತಿಯ ಮೂಲ ದಸ್ತಾವೇಜುಗಳನ್ನು ಇತರ ಅಗತ್ಯ ದಾಖಲೆಗಳೊಂದಿಗೆ ಸ್ವಾಧೀನ ಸಹಿತ ಒಪ್ಪಿಸುವುದಾಗಿ ಸಮ್ಮತಿಸಿದ್ದರು ಇದಾದ ಬಳಿಕ, 15 ವರ್ಷಗಳ ಪರಭಾರೆ ನಿಷೇಧ ಅವಧಿ ಮುಕ್ತಾಯದ ಬಳಿಕ ಖರೀದಿದಾರರು ಲೀಗಲ್ ನೋಟೀಸ್ ಜಾರಿಗೊಳಿಸಿ ಮಾರಾಟ ಕ್ರಯಪತ್ರ ಮಾಡಿಕೊಡುವಂತೆ ಕೇಳಿಕೊಳ್ಳುತ್ತಾರೆ. ಈ ನೋಟೀಸ್ ಗೆ ಪ್ರತ್ಯುತ್ತರ ನೀಡಿದ ಪ್ರತಿವಾದಿಯು, ತಾವು ಒಪ್ಪಂದವನ್ನೇ ಮಾಡಿಕೊಂಡಿಲ್ಲ ಎಂದು ಕ್ರಯ ಪತ್ರಕ್ಕೆ ನಿರಾಕರಿಸುತ್ತಾರೆ .
ಇದರಿಂದ ಬಾಧಿತರಾದ ವಾದಿಯು ಕರಾರು ಪತ್ರದ ಜಾರಿಗಾಗಿ ಕೋರ್ಟ್ ಮೊರೆ ಹೋಗುತ್ತಾರೆ . ಸೂಕ್ತ ವಿಚಾರಣೆ ನಡೆಸಿದ ವಿಚಾರಣಾ ನ್ಯಾಯಾಲಯ ವಾದಿಯ ದಾವೆಯನ್ನು ವಜಾಗೊಳಿಸುತ್ತದೆ. ಮೊದಲ ಮೇಲ್ಮನವಿ ನ್ಯಾಯಾಲಯದಲ್ಲೂ ವಾದಿಯವರಿಗೆ ಸೋಲಾಗುತ್ತದೆ. ಈ ತೀರ್ಪನ್ನು ಪ್ರಶ್ನಿಸಿ ವಾದಿಯು ಕರ್ನಾಟಕ ಹೈಕೋರ್ಟ್ಗೆ ಮೆಟ್ಟಿಲೇರುತ್ತಾರೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
