ನಕಲಿ ಅಂಗವೈಕಲ್ಯ ಪ್ರಮಾಣಪತ್ರಗಳ ಮೂಲಕ ಸಾರ್ವಜನಿಕ ಉದ್ಯೋಗ ಪಡೆಯುವುದು ನೈತಿಕ ಅಧೋಗತಿಗೆ ಸಮಾನ – ಹೈಕೋರ್ಟ್
ಮುಂಬೈ: ಸಾರ್ವಜನಿಕ ಉದ್ಯೋಗವನ್ನು ನಕಲಿ ಅಂಗವೈಕಲ್ಯ ಪ್ರಮಾಣಪತ್ರಗಳ ಮೂಲಕ ಪಡೆಯುವುದು ಗಂಭೀರ ನೈತಿಕ ಅಧೋಗತಿ (Moral Turpitude) ಆಗಿದ್ದು. ಅಂತಹ ವ್ಯಕ್ತಿಗಳಿಗೆ ಸೇವೆಯಲ್ಲಿ ಮುಂದುವರಿಯುವ ಯಾವುದೇ ರಕ್ಷಿತ ಹಕ್ಕು ಇರುವುದಿಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.
ನಕಲಿ ಅಂಗವೈಕಲ್ಯ ಪ್ರಮಾಣಪತ್ರಗಳು ನೈತಿಕ ಅಧೋಗತಿಗೆ ಸಮಾನ ಎಂದಿರುವ ನ್ಯಾಯಾಲಯ ಅನುಮಾನಿತ ಉದ್ಯೋಗಿಯ ಅಂಗವೆ,ಕಲ್ಯ ಮರುಮೌಲ್ಯಮಾಪನಕ್ಕೆ ಒಪ್ಪಿಗೆ ನೀಡಿದೆ. ಬಾಂಬೆ ಹೈಕೋರ್ಟ್ ರಾಜ್ಯದ ನಿಯಂತ್ರಣಾಧಿಕಾರವನ್ನು ಸಮರ್ಥಿಸಿ ಮಹತ್ವದ ತೀರ್ಪು ನೀಡಿದ್ದು. ಸರ್ಕಾರಿ ನೌಕರರು ಸಲ್ಲಿಸುವ ದಾಖಲೆಗಳ ನಿಜ ಅಸ್ತಿತ್ವವನ್ನು ಪರಿಶೀಲಿಸುವುದು ಪ್ರತಿಯೊಬ್ಬ ಸಾರ್ವಜನಿಕ ಉದ್ಯೋಗದಾತನ ಅಂತರ್ನಿಹಿತ ಹಕ್ಕಾಗಿದೆ ಎಂದು ಹೇಳಿದೆ.
ನ್ಯಾಯಮೂರ್ತಿ ರವೀಂದ್ರ ಪಿ ಶುಗೆ ಮತ್ತು ನ್ಯಾಯಮೂರ್ತಿ ಅಭಯ್ ಜಿ ಮಂತ್ರಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ಇದರಲ್ಲಿ ಅಂಗವೈಕಲ್ಯ ಪ್ರಮಾಣಪತ್ರಗಳನ್ನು ಹೊಂದಿರುವ ಸರ್ಕಾರಿ ನೌಕರರ ವಿರುದ್ಧ ತಪ್ಪು ಮಾಹಿತಿ ಅಥವಾ ವ್ಯವಸ್ಥಿತವಾಗಿ ವಂಚನೆಯ ಬಗ್ಗೆ, ನಿಜವಾದ ಅನುಮಾನ ಉದ್ಭವಿಸಿದಾಗ, ಅವರ ವೈದ್ಯಕೀಯ ಸ್ಥಿತಿಯ ಮರುಪರಿಶೀಲನೆ ನಡೆಸುವ ಅಧಿಕಾರವೂ ಸೇರಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ವಿವಿಧ ವಕೀಲರು ಸಲ್ಲಿಸಿದ್ದ ಪಟ್ಟಿಗಳ ಪ್ರಕಾರ, “ಶ್ರವಣ ದೋಷ” (hearing impairment) ಅತ್ಯಂತ ಹೆಚ್ಚು ಬಳಸಲ್ಪಟ್ಟ ಅಂಗವೈಕಲ್ಯವಾಗಿದ್ದು, ಇಂತಹ PwD ವ್ಯಕ್ತಿಗಳಲ್ಲಿ 90% ಕ್ಕಿಂತ ಹೆಚ್ಚು ಮಂದಿ ನೇಮಕಾತಿಯ ನಂತರವೇ ಅಂಗವೈಕಲ್ಯ ಪಡೆದಿರುವುದಾಗಿ ತೋರಿಸಲಾಗಿದೆ. ಇದು ರಾಜ್ಯ ಸರ್ಕಾರ ಅಂಗವಿಕಲ ಉದ್ಯೋಗಿಗಳಿಗೆ ವಿಶೇಷ ಸೌಲಭ್ಯಗಳನ್ನು ಪರಿಚಯಿಸಿದ ಬಳಿಕ ಹೆಚ್ಚಾಗಿ ಕಂಡುಬಂದಿದೆ ಎಂದು ನ್ಯಾಯಪೀಠ ಗಮನಿಸಿದೆ.
ನಕಲಿ ವೈದ್ಯಕೀಯ ದಾಖಲೆಗಳ ಆಧಾರದ ಮೇಲೆ ಸಾರ್ವಜನಿಕ ಉದ್ಯೋಗ ಪಡೆಯುವುದು ಅಥವಾ ಉಳಿಸಿಕೊಳ್ಳುವುದು ಭಾರತದ ಸಂವಿಧಾನದ ವಿರುದ್ಧದ ವಂಚನೆ ಹಾಗೂ ಗಂಭೀರ ನೈತಿಕ ಅಧೋಗತಿ. ಕಲ್ಯಾಣ ಯೋಜನೆಗಳ ಮೀಸಲಾತಿಯನ್ನು ದುರುಪಯೋಗಪಡಿಸಿಕೊಳ್ಳುವುದು ಉದ್ಯೋಗದಾತರ ವಿಶ್ವಾಸವನ್ನು ನಾಶಮಾಡುತ್ತದೆ ಮತ್ತು ಆ ಮೂಲಕ ಪಡೆದ ಎಲ್ಲಾ ಸೌಲಭ್ಯಗಳು ಆರಂಭದಿಂದಲೇ ಅಮಾನ್ಯವಾಗುತ್ತವೆ ಎಂದು ನ್ಯಾಯಪೀಠ ಹೇಳಿದೆ.
ಮಹಾರಾಷ್ಟ್ರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂತಹ ನಕಲಿ ಸರ್ಟಿಫಿಕೇಟ್ ಹಗರಣ ನಡೆದಿದೆ. ಅನೇಕ ಸರ್ಕಾರಿ ನೌಕರರು ಸೇವೆಯಲ್ಲಿದ್ದಾಗಲೇ ದೈಹಿಕ ಅಂಗವೈಕಲ್ಯ ಪ್ರಮಾಣಪತ್ರಗಳನ್ನು ಪಡೆದು ಕಲ್ಯಾಣ ಸೌಲಭ್ಯಗಳನ್ನು ಪಡೆಯಲು ಆರಂಭಿಸಿದ್ದರು. ವಿಶೇಷವಾಗಿ, ಶ್ರವಣ ದೋಷವನ್ನು ಉಲ್ಲೇಖಿಸಿ ಸೌಲಭ್ಯಗಳನ್ನು ಬೇಡಿಕೊಂಡವರಲ್ಲಿ 90% ಕ್ಕಿಂತ ಹೆಚ್ಚು ಮಂದಿ ನೇಮಕಾತಿಯ ನಂತರವೇ ಅಂಗವೈಕಲ್ಯ ಹೊಂದಿದ್ದಾರೆಂದು ತೋರಿಸಿಕೊಂಡಿದ್ದು, ಇದು ಸರ್ಕಾರದ ವಿಶೇಷ ಸೌಲಭ್ಯಗಳ ಪರಿಚಯದ ಬಳಿಕ ಹೆಚ್ಚಾಗಿದೆ ಎಂದು ರಾಜ್ಯ ಸರ್ಕಾರ ಗಮನಕ್ಕೆ ತಂದಿತ್ತು. ಇದರಿಂದ ರಾಜ್ಯ ಸರ್ಕಾರ 16 ಜೂನ್ 2025 ರಂದು ಸರ್ಕ್ಯುಲರ್ ಹಾಗೂ 9 ಅಕ್ಟೋಬರ್ 2025 ರಂದು ಸರ್ಕಾರದ ನಿರ್ಣಯ ಹೊರಡಿಸಿ, ಅಂಗವೈಕಲ್ಯ ಮೀಸಲಾತಿಯಲ್ಲಿ ನೇಮಕಗೊಂಡ ಪ್ರಾಥಮಿಕ ಶಿಕ್ಷಕರ ವೈದ್ಯಕೀಯ ದಾಖಲೆಗಳನ್ನು ಮರುಪರಿಶೀಲಿಸಲು ಆದೇಶಿಸಿತು.
ಮರುಪರಿಶೀಲನೆಯ ವೇಳೆ ಅನೇಕ ಶಿಕ್ಷಕರ ಅಂಗವೈಕಲ್ಯ ಪ್ರಮಾಣವು ಕಾನೂನಿನ ಪ್ರಕಾರ ಅಗತ್ಯವಿರುವ 40% ಗಿಂತ ಕಡಿಮೆ ಇರುವುದಾಗಿಯೂ, ಕೆಲವರು ಸಂಪೂರ್ಣವಾಗಿ ಸಾಮಾನ್ಯ ದೈಹಿಕ ಸ್ಥಿತಿಯಲ್ಲಿರುವುದಾಗಿಯೂ ವೈದ್ಯಕೀಯ ಮಂಡಳಿಗಳು ಪತ್ತೆಹಚ್ಚಿದವು. ಇದರಿಂದ ಪುಣೆ ಜಿಲ್ಲಾ ಪರಿಷತ್ ಮುಂತಾದ ಪ್ರಾದೇಶಿಕ ಸಂಸ್ಥೆಗಳು ಅಮಾನತು ಹಾಗೂ ಕಾರಣ ಕಾಣಿಕೆ ನೋಟಿಸ್ ಕ್ರಮಗಳನ್ನು ಆರಂಭಿಸಿತು ಈ ಕ್ರಮಗಳನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ನ್ಯಾಯಾಲಯ ರಾಜ್ಯದ ಅಧಿಕಾರವನ್ನು ಸಮರ್ಥಿಸಿ, ಸಮಾನ ಅವಕಾಶಗಳನ್ನು ರಕ್ಷಿಸುವುದು ರಾಜ್ಯದ ಸಂವಿಧಾನಾತ್ಮಕ ಕರ್ತವ್ಯವಾಗಿದ್ದು, ನಿಜವಾದ ಅಂಗವೈಕಲ್ಯ ಹೊಂದಿದವರಿಗೆ ಮೀಸಲಾದ ಸೌಲಭ್ಯಗಳನ್ನು ವಂಚನೆಯ ಮೂಲಕ ಕಬಳಿಸುವವರನ್ನು ತಡೆಯುವ ಜವಾಬ್ದಾರಿಯೂ ಅದರಲ್ಲಿ ಸೇರಿದೆ ಎಂದು ಹೇಳಿತು. “RPWD Act ಅಡಿಯಲ್ಲಿ ಒಮ್ಮೆ ಅಂಗವೈಕಲ್ಯ, ಪ್ರಮಾಣಪತ್ರ ನೀಡಿದರೆ ಅದು ಎಲ್ಲಾ ಸಂದರ್ಭಗಳಲ್ಲಿಯೂ ಶಾಶ್ವತವಾಗಿ ಅಂತಿಮವೆಂದು ಪರಿಗಣಿಸಲಾಗುವುದಿಲ್ಲ” ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.
ಅರ್ಜಿಗಳನ್ನು ಭಾಗಶಃ ಮಾನ್ಯಗೊಳಿಸಿ, ತಕ್ಷಣದ ಅಮಾನತು ಅಥವಾ ವೇತನ ನಿಲ್ಲಿಸುವ ಕ್ರಮಗಳನ್ನು ರದ್ದು ಪಡಿಸಿತು. ಆದರೆ ಎಲ್ಲಾ ಅರ್ಜಿದಾರರೂ ವಿಶೇಷ ವೈದ್ಯಕೀಯ ಮಂಡಳಿಯ ಮುಂದೆ ಮರು ವೈದ್ಯಕೀಯ ಪರೀಕ್ಷೆಗೆ ಹಾಜರಾಗಬೇಕು ಎಂದು ಆದೇಶಿಸಿತು.
ಮರುಪರಿಶೀಲನೆಯಲ್ಲಿ ಅಂಗವೈಕಲ್ಯ ಪ್ರಮಾಣ 40% ಕ್ಕಿಂತ ಕಡಿಮೆ ಎಂದು ಕಂಡುಬಂದರೆ, ಕಡ್ಡಾಯ ನಿವೃತ್ತಿ ಅಥವಾ ಸೇವೆಯಿಂದ ವಜಾಗೊಳಿಸುವ ಮೊದಲು ಸರಿಯಾದ ಇಲಾಖಾ ತನಿಖೆ ನಡೆಸಬೇಕು ಎಂದು ನ್ಯಾಯಪೀಠ ಸೂಚಿಸಿದೆ. ಜೊತೆಗೆ ನಕಲಿ ಪ್ರಮಾಣಪತ್ರಗಳನ್ನು ಸೃಷ್ಟಿಸಲು ಸಹಕರಿಸಿದ ವೈದ್ಯರ ವಿರುದ್ಧ ಕಠಿಣ ಶಿಸ್ತು ಮತ್ತು ಕ್ರಿಮಿನಲ್ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆದೇಶಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
