02/06/2026

Law Guide Kannada

Online Guide

ಮದುವೆಯಾದ ಮಾತ್ರಕ್ಕೆ ಮಹಿಳೆಯ ವ್ಯಕ್ತಿತ್ವ, ಐಡೆಂಟಿಟಿ ಕಳೆದು ಹೋಗಲ್ಲ- ಸುಪ್ರೀಂ ಕೋರ್ಟ್

ನವದೆಹಲಿ: ಪತ್ನಿಯು ತನ್ನ ವೃತ್ತಿಜೀವನದ ಆಸೆಗಳನ್ನು ಮುಂದುವರಿಸುವುದನ್ನು ‘ವೈವಾಹಿಕ ಕ್ರೌರ್ಯ’ ಎಂದು ಕರೆಯುವುದು ಪ್ರತಿಗಾಮಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಆಕೆ ಮದುಯಾದ ಮಾತ್ರಕ್ಕೆ ಐಡೆಂಟಿಟಿ ಕಳೆದು ಹೋಗಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ವೈವಾಹಿಕ ಜೀವನದಲ್ಲಿ ಲಿಂಗ ಸಮಾನತೆ ಕುರಿತು ಅತ್ಯಂತ ಕಠಿಣ ಮಾತುಗಳಲ್ಲಿ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ರಾ ಅವರಿದ್ದ ನ್ಯಾಯಪೀಠವು, ಮಹಿಳೆಯು ಮದುವೆ ಆದ ಮಾತ್ರಕ್ಕೆ ಆಕೆ ತನ್ನ ವ್ಯಕ್ತಿತ್ವ ಹಾಗೂ ಐಡೆಂಟಿಟಿಯನ್ನು ಕಳೆದುಕೊಳ್ಳುವುದಿಲ್ಲ. ಪತ್ನಿಯು ತನ್ನ ವೃತ್ತಿಜೀವನದ ಆಸೆಗಳನ್ನು ಮುಂದುವರಿಸುವುದನ್ನು ‘ವೈವಾಹಿಕ ಕ್ರೌರ್ಯ’ ಎಂದು ಕರೆಯುವುದು ಪ್ರತಿಗಾಮಿ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಇದು ಆಧುನಿಕ ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದೆ.

ಪತ್ನಿಯ ವೃತ್ತಿಪರ ಗುರುತು ಪತಿಯ ಅನುಮೋದನೆಗೆ ಒಳಪಟ್ಟಿರುತ್ತದೆ ಮತ್ತು ಆಕೆ ತನ್ನ ಆಸೆಗಳನ್ನು ಪತಿಯ ಕೆಲಸದ ಬೇಡಿಕೆಗಳಿಗಾಗಿ ತ್ಯಾಗ ಮಾಡಬೇಕು ಎಂಬ ಕೆಳಹಂತದ ನ್ಯಾಯಾಲಯಗಳ ಧೋರಣೆಯು “ಪ್ರಾಚೀನ ಸಾಮಾಜಿಕ ಕಲ್ಪನೆಗಳ ಮೇಲೆ ಆಧಾರಿತವಾಗಿದೆ. ಸಮಾಜವು ಮಹಿಳಾ ಸಬಲೀಕರಣದ ಬಗ್ಗೆ ಹೆಮ್ಮೆಯಿಂದ ಮಾತನಾಡುವ ಈ ಯುಗದಲ್ಲಿ, ಪತ್ನಿಯು ತನ್ನ ವೃತ್ತಿಜೀವನದ ಗುರಿಗಳನ್ನು ಬೆನ್ನಟ್ಟುವುದರಿಂದ ಪತಿ ಅಥವಾ ಅತ್ತೆ-ಮಾವಂದಿರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಅದನ್ನು ‘ಕ್ರೌರ್ಯ’ ಎಂದು ಕರೆಯುವುದು ಅತ್ಯಂತ ಆಕ್ಷೇಪಾರ್ಹ ಮತ್ತು ಖಂಡನೀಯ. ಮದುವೆಯು ಮಹಿಳೆಯ ವ್ಯಕ್ತಿತ್ವ ಅಥವಾ ಸ್ವಾಯತ್ತತೆಯನ್ನು ಅಳಿಸಿಹಾಕುವುದಿಲ್ಲ. ಆಕೆಯನ್ನು ಕೇವಲ ಪತಿಯ ಮನೆಯ ಒಂದು ‘ಅಂಗ’ (ಚಿಠಿಠಿeಟಿಜಚಿge) ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠವು ಹೇಳಿದೆ.

ದಂತ ವೈದ್ಯೆಯಾಗಿದ್ದ ಪತ್ನಿಯ ವಿರುದ್ಧ ಕೌಟುಂಬಿಕ ನ್ಯಾಯಾಲಯ ಮತ್ತು ಗುಜರಾತ್ ಉಚ್ಚ ನ್ಯಾಯಾಲಯವು ನೀಡಿದ್ದ ‘ಕ್ರೌರ್ಯ ಮತ್ತು ಪರಿತ್ಯಾಗ’ (ಜeseಡಿಣioಟಿ) ಎಂಬ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ರದ್ದುಗೊಳಿಸಿತು. ಸೇನಾ ಅಧಿಕಾರಿಯಾಗಿದ್ದ ಪತಿಯು, ಪತ್ನಿಯು ತನ್ನ ವೃತ್ತಿಜೀವನಕ್ಕಾಗಿ ಅಹಮದಾಬಾದ್ ನಲ್ಲಿ ನೆಲೆಸಿದ್ದನ್ನು ಕ್ರೌರ್ಯ ಎಂದು ಸುಪ್ರೀಂನಲ್ಲಿ ವಾದಿಸಿದ್ದರು.

ಈ ವೇಳೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಪೀಠವು, ಮಕ್ಕಳ ಆರೋಗ್ಯ ಮತ್ತು ಉತ್ತಮ ಭವಿಷ್ಯಕ್ಕಾಗಿ ಪತ್ನಿಯು ಸುರಕ್ಷಿತ ವಾತಾವರಣವನ್ನು ಹುಡುಕುವುದು ತಪ್ಪಲ್ಲ. ಒಂದು ವೇಳೆ ಪರಿಸ್ಥಿತಿ ಉಲ್ಟಾ ಆಗಿದ್ದರೆ, ಅಂದರೆ ಪತ್ನಿಗೆ ವರ್ಗಾವಣೆಯಾಗುವ ಕೆಲಸವಿದ್ದಿದ್ದರೆ, ಪತಿಯು ತನ್ನ ವೃತ್ತಿಯನ್ನು ಬಿಡಬೇಕೆಂದು ಯಾರೂ ನಿರೀಕ್ಷಿಸುತ್ತಿರಲಿಲ್ಲ. ಪತಿಯು ದೂರದ ಪ್ರದೇಶದಲ್ಲಿ ಸೇನಾ ಅಧಿಕಾರಿಯಾಗಿದ್ದಾರೆ ಎಂಬ ಕಾರಣಕ್ಕೆ, ಪತ್ನಿಯು ತನ್ನ ದಂತ ವೈದ್ಯಕೀಯ ವೃತ್ತಿಯ ಬಗ್ಗೆ ಯೋಚಿಸಬಾರದು ಎಂಬ ನಿರೀಕ್ಷೆಯು “ಊಳಿಗಮಾನ್ಯ ಮತ್ತು ಪ್ರತಿಗಾಮಿ ಮನಸ್ಥಿತಿಯ ಸಂಕೇತವಾಗಿದೆ ಎಂದು ನ್ಯಾಯಪೀಠ ಟೀಕಿಸಿದೆ.

ನ್ಯಾಯಾಲಯವು ಕ್ರೌರ್ಯದ ಆರೋಪಗಳನ್ನು ತೆಗೆದು ಹಾಕಿದರೂ, ವಿಚ್ಛೇದನ ಆದೇಶವನ್ನು ರದ್ದುಗೊಳಿಸಲಿಲ್ಲ. ಏಕೆಂದರೆ ಪತ್ನಿಯು ಮದುವೆಯನ್ನು ಮುಂದುವರಿಸಲು ಇಚ್ಛಿಸಿರಲಿಲ್ಲ ಮತ್ತು ಪತಿಯು ಈಗಾಗಲೇ ಮರುಮದುವೆಯಾಗಿದ್ದರು. ಆದ್ದರಿಂದ ಈ ವಿಚ್ಚೇದನವನ್ನು “ಸರಿಪಡಿಸಲಾಗದ ವೈವಾಹಿಕ ಸಂಬಂಧದ ಬಿರುಕು” ಎಂಬ ಆಧಾರದ ಮೇಲೆ ನೀಡಲಾಗಿದೆ ಎಂದು ಪರಿಗಣಿಸಲಾಯಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.