02/06/2026

Law Guide Kannada

Online Guide

ತನಗಲ್ಲದಿದ್ದರೂ ಇನ್ನೊಬ್ಬರಿಗಾಗಿ ಲಂಚ ಪಡೆಯುವುದೂ ಸಹ ಅಪರಾಧ: ‘ಹೈ’ ತೀರ್ಪು ರದ್ದುಗೊಳಿಸಿದ ಸುಪ್ರೀಂ

ನವದೆಹಲಿ: ಸರ್ಕಾರಿ ನೌಕರನು ತನಗೆ ಅಲ್ಲದಿದ್ದರೂ, ತನಗಲ್ಲದಿದ್ದರೂ ಇನ್ನೊಬ್ಬರಿಗಾಗಿ ಲಂಚ ಪಡೆದರೂ ಸಹ ಅದು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅಪರಾಧ ಎಂದು ಸ್ಪಷ್ಟಪಡಿಸಿದ ಸುಪ್ರೀಂಕೋರ್ಟ್ ಈ ಸಂಬಂಧ ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ರದ್ದುಗೊಳಿಸಿದೆ.

ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಪಿಎಸ್ ಐ ಕೆ.ರಂಗಯ್ಯ ವಿರುದ್ಧದ ಎಫ್ಐಆರ್ ಅನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಸಂಜಯ್ ಕರೋಲ್ ಮತ್ತು ಎನ್.ಕೋಟೀಶ್ವರ್ ಸಿಂಗ್ ಅವರ ಪೀಠವು ಈ ತೀರ್ಪು ನೀಡಿದೆ.

ರಂಗಯ್ಯ ನೇರವಾಗಿ ಲಂಚಕ್ಕೆ ಬೇಡಿಕೆ ಇಟ್ಟಿಲ್ಲ ಅಥವಾ ಲಂಚದ ಹಣವನ್ನು ವೈಯಕ್ತಿಕವಾಗಿ ಪಡೆದುಕೊಂಡಿಲ್ಲ ಎಂದು ಹೇಳಿ ಕರ್ನಾಟಕ ಹೈಕೋರ್ಟ್ 2023ರ ಜೂನ್ ನಲ್ಲಿ ದಾಖಲಾಗಿದ್ದ ಎಫ್ ಐಆರ್ ಅನ್ನು ರದ್ದುಗೊಳಿಸಿತ್ತು. ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ ಎಫ್ ಐಆರ್ ಅನ್ನು ಮರುಸ್ಥಾಪಿಸಿದ ಸುಪ್ರೀಂ ಕೋರ್ಟ್ ಪೀಠ, ಕಾನೂನು ಪ್ರಕಾರ ಪ್ರಕರಣವನ್ನು ಮುಂದುವರಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿದೆ.

ಸರ್ಕಾರಿ ನೌಕರನು ಅಧೀನ ನೌಕರ ಒಳಗೊಂಡಂತೆ ಇನ್ನೊಬ್ಬನಿಗಾಗಿ ಲಂಚಕ್ಕೆ ಬೇಡಿಕೆಯಿಟ್ಟರೆ ಅಥವಾ ಲಂಚ ಪಡೆಯಲು ಪ್ರಯತ್ನಿಸಿದರೆ ಆತನನ್ನು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಅಪರಾಧಿಯಾಗಿ ಪರಿಗಣಿಸಬಹುದು. ಸರ್ಕಾರಿ ನೌಕರನೊಬ್ಬ ಭ್ರಷ್ಟಾಚಾರ ತಡೆ ಕಾಯ್ದೆಯಡಿ ತಪ್ಪಿತಸ್ಥ ಎನಿಸಿಕೊಳ್ಳಲು ವೈಯಕ್ತಿವಾಗಿ ಲಂಚ ಪಡೆಯಬೇಕು ಎಂದೇನಿಲ್ಲ ಎಂದು ತನ್ನ ತೀರ್ಪಿನಲ್ಲಿ ನ್ಯಾಯಪೀಠ ಸ್ಪಷ್ಟಪಡಿಸಿದೆ.

ಸರ್ಕಾರಿ ನೌಕರನು ಅಕ್ರಮವಾಗಿ ಬೇರೊಬ್ಬನಿಗೆ ಲಾಭ ತಂದುಕೊಡಲು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವ ಕೃತ್ಯವು ಈ ಕಾಯ್ದೆಯ ಸೆಕ್ಷನ್ 7ರ ವ್ಯಾಪ್ತಿಗೆ ಬರುತ್ತದೆ. ‘ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7ರ ಅಡಿಯಲ್ಲಿ ಲಂಚದ ಆರೋಪ ಹೊರಿಸಲು ನಿರ್ದಿಷ್ಟ ಸರ್ಕಾರಿ ನೌಕರನು ಲಂಚದ ಹಣವನ್ನು ತನಗಾಗಿ ಪಡೆಯಬೇಕು ಎಂಬುದು ಅನಿವಾರ್ಯವಲ್ಲ. ಮತ್ತೊಬ್ಬ ವ್ಯಕ್ತಿಗಾಗಿ ಲಂಚದ ಬೇಡಿಕೆ ಇಟ್ಟಂತಹ ಪ್ರಕರಣಗಳನ್ನೂ ಇದು ಒಳಗೊಳ್ಳುತ್ತದೆ’ ಎಂಬುದನ್ನು ಪೀಠವು ಗಮನಿಸಿತು.

ಸರ್ಕಾರಿ ನೌಕರ ವೈಯಕ್ತಿಕ ಪ್ರಭಾವ ಬಳಸಿ ನೇರವಾಗಿ ಅಪರಾಧ ಮಾಡಬಹುದು ಅಥವಾ ಇನ್ನೊಬ್ಬ ನೌಕರನ ಮೂಲಕ ಆ ಅಪರಾಧವನ್ನು ನಡೆಸಲೂಬಹುದು. ತೆರೆಮರೆಯಲ್ಲಿ ನಿಂತು ಅಧೀನ ನೌಕರನ ಮೂಲಕ ಲಂಚಕ್ಕೆ ಬೇಡಿಕೆ ಇಟ್ಟರೆ ಆತನೂ ಆ ಕೃತ್ಯಕ್ಕೆ ಜವಾಬ್ದಾರನಾಗುತ್ತಾನೆ ಎಂದು ನ್ಯಾಯಪೀಠ ಹೇಳಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.