02/06/2026

Law Guide Kannada

Online Guide

ಗಣನೀಯ ತೊಂದರೆ, ವಿಳಂಬ ವೇಳೆ ಮಧ್ಯಸ್ಥಿಕೆ ತೀರ್ಪು ಮಾರ್ಪಡಿಸಬಹುದು- 14 ವರ್ಷಗಳ ಹಳೇ ವಿವಾದಕ್ಕೆ ತೆರೆ ಎಳೆದ ಸುಪ್ರೀಂ

ನವದೆಹಲಿ: ಗಣನೀಯ ತೊಂದರೆ, ವಿಳಂಬ ಸಂದರ್ಭದಲ್ಲಿ ಮಧ್ಯಸ್ಥಿಕೆ ತೀರ್ಪನ್ನು ರದ್ದುಪಡಿಸದೇ ಅದನ್ನು ಮಾರ್ಪಡಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡುವ ಮೂಲಕ 14 ವರ್ಷಗಳ ಹಳೆ ವಿವಾದಕ್ಕೆ ತೆರೆ ಎಳೆದಿದೆ.

ಗಣನೀಯ ತೊಂದರೆ ಹಾಗೂ ವಿಳಂಬ ಉಂಟಾಗುವ ಸಂದರ್ಭಗಳಲ್ಲಿ ಮಧ್ಯಸ್ಥಿಕೆ ತೀರ್ಪನ್ನು ರದ್ದುಪಡಿಸುವ ಬದಲು ನ್ಯಾಯಾಲಯಗಳು ಅದನ್ನು ಮಾರ್ಪಡಿಸಬಹುದು ಮಧ್ಯಸ್ಥಿಕೆ ತೀರ್ಪಿನಲ್ಲಿ ದೋಷಗಳಿದ್ದರೂ, ಅದನ್ನು ಸಂಪೂರ್ಣವಾಗಿ ರದ್ದು ಪಡಿಸಿ ಪಕ್ಷಕಾರರನ್ನು ಮತ್ತೊಮ್ಮೆ ಮಧ್ಯಸ್ಥಿಕೆ ಮತ್ತು ನ್ಯಾಯಾಂಗ ಹೋರಾಟದ ಸುತ್ತಿಗೆ ತಳ್ಳುವ ಬದಲು, ನ್ಯಾಯ ಸಾಧನೆಗಾಗಿ ಸಂವಿಧಾನದ ವಿಧಿ 142 ಅಡಿಯಲ್ಲಿ ತೀರ್ಪನ್ನು ಮಾರ್ಪಡಿಸಿ ಅಂತಿಮ ಪರಿಹಾರ ನೀಡಬಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಪುನರುಚ್ಚರಿಸಿದೆ.

ಪ್ರಕರಣದ ವಿವರ…
2010ರಲ್ಲಿ ನಡೆದ ಪುನರ್ ನಿರ್ಮಾಣ ಒಪ್ಪಂದದ ಪ್ರಕಾರ, ದೆಹಲಿಯ ಭಯಾನಾ ಕುಟುಂಬವು ತಮ್ಮ ಹಳೆಯ ಕಟ್ಟಡವನ್ನು ಮರುನಿರ್ಮಿಸಲು ಬಿಲ್ಡರ್ ಗೆ ಅವಕಾಶ ನೀಡಿತ್ತು. ಪ್ರತಿಯಾಗಿ ಬಿಲ್ಡರ್ ಗೆ ಕಟ್ಟಡದ ಎರಡನೇ ಮಹಡಿಯನ್ನು ಉಳಿಸಿಕೊಳ್ಳುವ ಹಕ್ಕು ನೀಡಲಾಗಿತ್ತು. ಜೊತೆಗೆ, ಬಿಲ್ಡರ್ ಮಾಲೀಕರಿಗೆ 64 ಲಕ್ಷ ರೂ. ವನ್ನು ಮುಂಗಡ ಹಣ ಮತ್ತು ಪರಿಹಾರವಾಗಿ ಪಾವತಿಸಬೇಕಿತ್ತು. ಒಪ್ಪಂದದ ಪ್ರಕಾರ, ನಿರ್ಮಾಣ ಕಾರ್ಯವನ್ನು 12 ತಿಂಗಳೊಳಗೆ ಪೂರ್ಣಗೊಳಿಸಬೇಕಾಗಿದ್ದು. ಹೆಚ್ಚುವರಿ 2 ತಿಂಗಳ ಸಡಿಲಾವಧಿಯೂ ನೀಡಲಾಗಿತ್ತು. ಅದಾದ ಬಳಿಕವೂ ಕೆಲಸ ಪೂರ್ಣಗೊಳ್ಳದಿದ್ದರೆ, ಪ್ರತಿದಿನ 10,000 ರೂ.ದಂಡ ಪಾವತಿಸಬೇಕೆಂದು ನಿಗದಿಪಡಿಸಲಾಗಿತ್ತು. ಈ ಪ್ರಕರಣದಲ್ಲಿ, ನಿರ್ಮಾಣ ಕಾರ್ಯವು ಕೇವಲ ನೆಲಮಾಳಿಗೆ, ಸ್ಕಿಲ್ಡ್ ಮತ್ತು ನೆಲಮಹಡಿ ನಿರ್ಮಾಣದ ನಂತರ 2011ರ ಆಗಸ್ಟ್ನಲ್ಲಿ ಸ್ಥಗಿತಗೊಂಡಿತ್ತು. ನಂತರ ಮಾಲೀಕರು 2011ರ ನವೆಂಬನರ್ಲ್ಲಿ ಒಪ್ಪಂದವನ್ನು ರದ್ದು ಪಡಿಸಿದರು. ಬಳಿಕ ವಿವಾದವನ್ನು ಮಧ್ಯಸ್ಥಿಕೆಗೆ ಒಪ್ಪಿಸಲಾಯಿತು.

2013ರಲ್ಲಿ ಮಧ್ಯಸ್ಥರು (Arbitrator) ಬಿಲ್ಡರ್ ಒಪ್ಪಂದ ಉಲ್ಲಂಘನೆ ಮಾಡಿರುವುದಾಗಿ ಕಂಡು ಪರಿಹಾರಧನ ನೀಡಿದರು. ಜೊತೆಗೆ, ಬಿಲ್ಡರ್ ಪ್ರತಿದಾವೆಯನ್ನು ಭಾಗಶಃ ಅಂಗೀಕರಿಸಿದರು. ನಂತರ ಈ ಪ್ರಕರಣವು ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆ, 1996ರ ಸೆಕ್ಷನ್ 34 ಮತ್ತು 37ರ ಅಡಿಯಲ್ಲಿ ದೆಹಲಿ ಹೈಕೋರ್ಟ್ ಮೂಲಕ ಸುಪ್ರೀಂ ಕೋರ್ಟ್ ಅಂಗಳಕ್ಕೆ ತಲುಪಿತು.
ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ತೀರ್ಪಿನಲ್ಲಿ ಒಪ್ಪಂದದ ದಂಡದ ಲೆಕ್ಕಾಚಾರ ಸೇರಿದಂತೆ ಹಲವು ಅಂಶಗಳಲ್ಲಿ ಸ್ಪಷ್ಟ ಕಾನೂನುಬಾಹಿರತೆ (Patent Illegality) ಇರುವುದನ್ನು ಗಮನಿಸಿತು. ಆದರೆ, ಈ ಹಂತದಲ್ಲಿ ತೀರ್ಪನ್ನು ರದ್ದುಪಡಿಸಿದರೆ 2012ರಿಂದ ಬಾಕಿ ಇರುವ ವಿವಾದ ಮತ್ತೊಮ್ಮೆ ಆರಂಭವಾಗಿ, ಪಕ್ಷಕಾರರು ಹೊಸ ಮಧ್ಯಸ್ಥಿಕೆ ಮತ್ತು ಹೊಸ ನ್ಯಾಯಾಂಗ ಹೋರಾಟಕ್ಕೆ ಒಳಗಾಗಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿತು.

ಮಧ್ಯಸ್ಥಿಕೆ ತೀರ್ಪು ಸ್ಪಷ್ಟ ಕಾನೂನುಬಾಹಿರತೆಯಿಂದ ಕೂಡಿರುವುದರಿಂದ, ಮಧ್ಯಸ್ಥಿಕೆ ಮತ್ತು ಸಂಧಾನ ಕಾಯ್ದೆಯ ಸೆಕ್ಷನ್ 34(2ಂ) ಅಡಿಯಲ್ಲಿ ಅದನ್ನು ರದ್ದುಪಡಿಸಬಹುದಾಗಿದೆ. ಆದಾಗ್ಯೂ, ಪಕ್ಷಕಾರರು 2012ರಿಂದಲೇ ಈ ವಿವಾದದಲ್ಲಿ ನ್ಯಾಯಾಂಗ ಹೋರಾಟ ನಡೆಸುತ್ತಿರುವುದನ್ನು ಪರಿಗಣಿಸಿದಾಗ, ಅದನ್ನು ರದ್ದು ಪಡಿಸುವುದು ನ್ಯಾಯದ ಹಿತಾಸಕ್ತಿಗೆ ಅನುಕೂಲಕರವಾಗುವುದಿಲ್ಲ. ತೀರ್ಪನ್ನು ರದ್ದುಪಡಿಸುವುದರಿಂದ ಗಣನೀಯ ತೊಂದರೆ ಮತ್ತು ಅನಗತ್ಯ ವಿಳಂಬ ಉಂಟಾಗುವ ಸಂದರ್ಭಗಳಲ್ಲಿ, ಹಿಂದಿನ ತೀರ್ಪಿನಲ್ಲಿ ನಿಗದಿಪಡಿಸಿದ ಮಿತಿಗಳೊಳಗೆ ನ್ಯಾಯಾಲಯವು ಮಾರ್ಪಡಿಬಹುದು. ಜೊತೆಗೆ, ಪಕ್ಷಕಾರರ ನಡುವೆ ಸಾರ್ಥಕ ನ್ಯಾಯ ಸಾಧಿಸಲು, ಅವರನ್ನು ಮತ್ತೊಂದು ಹಂತದ ವ್ಯಾಜ್ಯಕ್ಕೆ ತಳ್ಳುವ ಬದಲು, ಸಂವಿಧಾನದ ವಿಧಿ 142ರ ಅಡಿಯಲ್ಲಿ ಸುಪ್ರೀಂ ಕೋರ್ಟ್ ತನ್ನ ಅಧಿಕಾರವನ್ನು ಬಳಸಬಹುದು. ಆದ್ದರಿಂದ, ಈ ವಿವಾದಕ್ಕೆ ಅಂತಿಮ ತೆರೆ ಎಳೆಯುವ ಉದ್ದೇಶದಿಂದ ನಾವು ವಿಧಿ 142ರ ಅಧಿಕಾರವನ್ನು ಚಲಾಯಿಸುತ್ತಿದ್ದೇವೆ ಎಂದು ನ್ಯಾಯಪೀಠ ನುಡಿಯಿತು.

ಅಂತಿಮವಾಗಿ, ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆ ತೀರ್ಪನ್ನೇ ಮಾರ್ಪಾಡು ಮಾಡಿ, 2011ರ ಸೆಪ್ಟೆಂಬರ್ನಿಂದ ನವೆಂಬರ್ ವರೆಗಿನ ಸೀಮಿತ ಅವಧಿಗೆ ಮಾಲೀಕರು 6.3 ಲಕ್ಷ ರೂ. ಒಪ್ಪಂದದ ದಂಡ ಪಡೆಯಲು ಅರ್ಹರು ಎಂದು ತೀರ್ಮಾನಿಸಿತು. ಅದೇ ವೇಳೆ, ಬಿಲ್ಡರ್ ಗೆ ಮರುಪಾವತಿ ಮತ್ತು ನಿರ್ಮಾಣ ವೆಚ್ಚ ಸೇರಿ ಒಟ್ಟು 181.92 ಲಕ್ಷ ರೂ. ಪಡೆಯುವ ಹಕ್ಕು ಇದೆ ಎಂದು ಘೋಷಿಸಿತು.

ಹಿಂದಿನ ಆದೇಶಗಳ ಪ್ರಕಾರ ಈಗಾಗಲೇ ಪಾವತಿಸಲಾದ ಮೊತ್ತಗಳನ್ನು ಸರಿಹೊಂದಿಸಿದ ಬಳಿಕ, ಉಳಿದ ಮೊತ್ತವನ್ನು ಪಾವತಿಸುವಂತೆ ನ್ಯಾಯಾಲಯ ನಿರ್ದೇಶನ ನೀಡಿತು. ಜೊತೆಗೆ, ಎರಡೂ ಪಕ್ಷಗಳಿಗೆ ಬಡ್ಡಿ ಪಡೆಯುವ ಹಕ್ಕಿಲ್ಲ ಎಂದು ಸುಪ್ರೀಂಕೋರ್ಟ್ ಸೂಚಿಸಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿ

Copyright © All rights reserved. | Newsphere by AF themes.