ಪರಸ್ಪರ ‘ಒಪ್ಪಿಗೆ ವಿಚ್ಚೇದನ’ಕ್ಕೆ ಒಪ್ಪಿ ನಂತರ ಹಿಂದೆ ಸರಿದು ಗೃಹ ಹಿಂಸೆ ಕೇಸ್ ಹಾಕಿದ ಪತ್ನಿಗೆ ಶಾಕ್ ಕೊಟ್ಟ ಸುಪ್ರೀಂ
ನವದೆಹಲಿ: ಪರಸ್ಪರ ಒಪ್ಪಿಗೆ ವಿಚ್ಚೇದನಕ್ಕೆ ಒಪ್ಪಿ ನಂತರ ಅದರಿಂದ ಹಿಂದೆ ಸರಿದು ಪತಿ ಮತ್ತು ಅವರ ತಾಯಿಯ ವಿರುದ್ದ ಗೃಹ ಹಿಂಸೆ ಪ್ರಕರಣ ದಾಖಲಿಸಿದ ಪತ್ನಿ ಶಾಕ್ ಕೊಟ್ಟ ಸುಪ್ರೀಂ ಕೋರ್ಟ್ ಪ್ರಕರಣವನ್ನೇ ರದ್ದುಗೊಳಿಸಿದೆ.
ಹಾಗೆಯೇ ಪರಸ್ಪರ ಒಪ್ಪಿಗೆಯ ವಿಚ್ಚೇದನ ಪ್ರಕರಣದಲ್ಲಿ ₹170 ಕೋಟಿ ಒಪ್ಪಂದದ ಪತ್ನಿಯ ವಾದವನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್, ವಿಚ್ಛೇದನದ ಅಂತಿಮ ಡಿಕ್ರಿ ಹೊರಬರುವ ಮೊದಲು ಯಾವುದೇ ಪಕ್ಷ ತನ್ನ ಒಪ್ಪಿಗೆಯನ್ನು ಹಿಂಪಡೆಯಬಹುದು. ಆದರೆ, ಮಧ್ಯಸ್ಥಿಕೆ (Mediation) ಮೂಲಕ ಮಾಡಿಕೊಂಡಿರುವ ವಿವಾಹ ಸಂಬಂಧಿತ ವಿವಾದಗಳ ಇತ್ಯರ್ಥದ ಒಪ್ಪಂದದ ಷರತ್ತುಗಳನ್ನು ಏಕಪಕ್ಷೀಯವಾಗಿ ತಿರಸ್ಕರಿಸಲು ಅಥವಾ ಕೈಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಾಲ್ ಮತ್ತು ವಿಜಯ್ ಬಿಡೋಯಿ ಅವರನ್ನೊಳಗೊಂಡ ಪೀಠವು, ಮಧ್ಯಸ್ಥಿಕೆಯ ಮೂಲಕ ದೃಢೀಕರಿಸಲ್ಪಟ್ಟ ಒಪ್ಪಂದವನ್ನು ಕೇವಲ ಬಲವಂತ, ವಂಚನೆ, ಅಕ್ರಮ ಪ್ರಭಾವ ಅಥವಾ ಒಪ್ಪಂದದ ಷರತ್ತುಗಳ ಉಲ್ಲಂಘನೆ ಸಾಬೀತಾದ ಸಂದರ್ಭದಲ್ಲಷ್ಟೇ ಪ್ರಶ್ನಿಸಬಹುದು ಎಂದು ಹೇಳಿದೆ.
2000ರಲ್ಲಿ ಅಪೀಲುದಾರ ಪತಿ ಮತ್ತು ಪ್ರತಿವಾದಿ ಪತ್ನಿಯ ವಿವಾಹವು ಹಿಂದೂ ಸಂಪ್ರದಾಯದಂತೆ ನೆರವೇರಿತ್ತು. ಅವರಿಗೆ ಒಬ್ಬ ಪುತ್ರಿ ಮತ್ತು ಒಬ್ಬ ಪುತ್ರನಿದ್ದಾರೆ. ದಾಂಪತ್ಯ ಭಿನ್ನಾಭಿಪ್ರಾಯಗಳಿಂದಾಗಿ ಅವರು 2022-23ರಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ಮಧ್ಯೆ ಪತಿ ವಿಚ್ಛೇದನಕ್ಕಾಗಿ ಕುಟುಂಬ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆ ಬಳಿಕ, ಪ್ರಕರಣವನ್ನು ಮಧ್ಯಸ್ಥಿಕೆಗೆ ಕಳುಹಿಸಲಾಯಿತು. 2024ರಲ್ಲಿ ಉಭಯ ಪಕ್ಷಗಳು ಎಲ್ಲಾ ವಿವಾದಗಳನ್ನು ಇತ್ಯರ್ಥಗೊಳಿಸುವ ಒಪ್ಪಂದಕ್ಕೆ ಬಂದವು.
ಆದ ಒಪ್ಪಂದವೇನು…?
ಪತಿ ಅಂತಿಮ ಇತ್ಯರ್ಥ ಮೊತ್ತದ ಮೊದಲ ಕಂತಾಗಿ ₹75 ಲಕ್ಷ ಪಾವತಿಸಿದರು. ಕಾರು ಖರೀದಿಗಾಗಿ ₹14 ಲಕ್ಷ ನೀಡಿದರು. ಅಭರಣಗಳನ್ನು ಹಿಂದಿರುಗಿಸಿದರು.
ಪತ್ನಿಯು ತನ್ನ ಬಾಧ್ಯತೆಯಂತೆ ₹2.52 ಕೋಟಿ ಮೊತ್ತವನ್ನು ಪತಿಗೆ ವರ್ಗಾಯಿಸಿದರು. ಆದರೆ ನಂತರ ಪತ್ನಿ ಪರಸ್ಪರ ಒಪ್ಪಿಗೆಯ ವಿಚ್ಛೇದನಕ್ಕೆ ನೀಡಿದ್ದ ಒಪ್ಪಿಗೆಯನ್ನು ಹಿಂಪಡೆದು, 2025ರಲ್ಲಿ ಪತಿ ಹಾಗೂ ಅವರ ತಾಯಿಯ ವಿರುದ್ಧ ಗೃಹಹಿಂಸೆ ಪ್ರಕರಣ ದಾಖಲಿಸಿದರು.
ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಮುಂದೆ ವಾದಿಸಿದ ಪತ್ನಿ, ಒಪ್ಪಂದದಲ್ಲಿ ಉಲ್ಲೇಖಿಸಿರುವ ಮೊತ್ತದ ಹೊರತಾಗಿ 120 ಕೋಟಿ ಮೌಲ್ಯದ ಆಭರಣಗಳು, 50 ಕೋಟಿ ರೂ. ಮೌಲ್ಯದ ಚಿನ್ನದ ಬಿಸ್ಕತ್ತುಗಳು, ತನ್ನ ಸ್ತ್ರೀಧನದ ಬದಲಾಗಿ ನೀಡುವುದಾಗಿ ಪತಿ ಭರವಸೆ ನೀಡಿದ್ದರು ಎಂದು ವಾದಿಸಿದರು. ಈ ಷರತ್ತುಗಳನ್ನು ಆದಾಯ ತೆರಿಗೆ ಇಲಾಖೆಯ ಗಮನ ತಪ್ಪಿಸಲು ಹಾಗೂ ಸಂಪತ್ತಿನ ತೆರಿಗೆ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ಒಪ್ಪಂದದಲ್ಲಿ ಸೇರಿಸಿರಲಿಲ್ಲ ಎಂದು ಕೂಡ ಅವರು ಆರೋಪಿಸಿದರು.
ಇಂತಹ ವಾದ ನ್ಯಾಯಾಲಯದ ಮುಂದೆ ಮಂಡಿಸಿರುವ ಧೈರ್ಯ ನಮಗೆ ಆಘಾತವನ್ನುಂಟು ಮಾಡಿದೆ.
ಇದಕ್ಕೆ ತೀಕ್ಷ ಪ್ರತಿಕ್ರಿಯೆ ನೀಡಿದ ನ್ಯಾಯಪೀಠವು, ಇಂತಹ ವಾದವನ್ನು ನ್ಯಾಯಾಲಯದ ಮುಂದೆ ಮಂಡಿಸಿರುವ ಧೈರ್ಯ ನಮಗೆ ಆಘಾತವನ್ನುಂಟು ಮಾಡಿದೆ. ಇದು ಕಾನೂನು ವ್ಯವಸ್ಥೆಯ ಬಗ್ಗೆ ತೋರಿಸಿರುವ ನಿರ್ಲಕ್ಷ್ಯದ ಪ್ರತೀಕವಾಗಿದೆ” ಎಂದು ಸುಪ್ರೀಂ ಕೋರ್ಟ್ ತೀವ್ರವಾಗಿ ಅಸಮಾಧಾನ ವ್ಯಕ್ತಪಡಿಸಿತು. ಅಲ್ಲದೆ, ಎರಡನೇ ಮೋಶನ್ ಅರ್ಜಿ ಸಲ್ಲಿಕೆಯಾಗಿದ ನಂತರ ಸುಮಾರು ಎಂಟು ತಿಂಗಳುಗಳ ಕಾಲ ಕಾಯ್ತು. ಬಳಿಕ ಗೃಹಹಿಂಸೆ ಪ್ರಕರಣ ದಾಖಲಿಸಿರುವುದಕ್ಕೆ ಪತ್ನಿಯು ಯಾವುದೇ ಸಮಂಜಸವಾದ ಕಾರಣ ನೀಡಿಲ್ಲ ಎಂದು ಕೋರ್ಟ್ ಗಮನಿಸಿತು. ದೀರ್ಘಕಾಲದ ವೈವಾಹಿಕ ವಿವಾದಗಳಲ್ಲಿ ಭಾವನೆಗಳು ಪ್ರಬಲವಾಗಿರುವುದು ಸಹಜ. ಆದರೆ ಆ ಭಾವನೆಗಳೇ ಕ್ರಿಮಿನಲ್ ಮೊಕದ್ದಮೆಗೆ ಆಧಾರವಾಗಲು ಅವಕಾಶ ನೀಡಬಾರದು. ಇಲ್ಲವಾದರೆ ಅದು ಕಾನೂನಿನ ದುರುಪಯೋಗ ಮತ್ತು ಅನಗತ್ಯ ಕಿರುಕುಳಕ್ಕೆ ಕಾರಣವಾಗುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.
ಗೃಹಹಿಂಸೆ ಪ್ರಕರಣವು ಪೂರ್ವನಿಯೋಜಿತವಾಗಿದ್ದು, ಕಾನೂನಿನ ದುರುಪಯೋಗವಾಗಿದೆ ಎಂದು ಕಂಡುಬಂದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಪೀಠವು ಅದನ್ನು ರದ್ದುಪಡಿಸಿತು. ಇದಲ್ಲದೆ, ಭಾರತದ ಸಂವಿಧಾನದ ಅನುಚ್ಛೇದ 142ರ ಅಸಾಧಾರಣ ಅಧಿಕಾರವನ್ನು ಬಳಸಿ, ವಿವಾಹ ಸಂಬಂಧವು ಸಂಪೂರ್ಣವಾಗಿ ಮುರಿದು ಹೋಗಿರುವುದರಿಂದ ವಿವಾಹವನ್ನು ವಿಸರ್ಜಿಸಿತು.
ಮಧ್ಯಸ್ಥಿಕೆಯ ಮೂಲಕ ದೃಢೀಕರಿಸಲ್ಪಟ್ಟ ಒಪ್ಪಂದದಿಂದ ಹಿಂದೆ ಸರಿಯುವ ಪಕ್ಷದ ವಿರುದ್ಧ ಸಾಮಾನ್ಯವಾಗಿ ಭಾರೀ ವೆಚ್ಚ (Costs) ವಿಧಿಸಬೇಕೆಂದು ಕೂಡ ನ್ಯಾಯಪೀಠ ಸೂಚಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
