ವಾಲ್ಮೀಕಿ ನಿಗಮ ಹಗರಣ: ಕಾರಾಗೃಹ ಡಿಜಿ ಮತ್ತು ಜೈಲು ಅಧೀಕ್ಷಕರ ಖುದ್ದು ಹಾಜರಿಗೆ ಕೋರ್ಟ್ ಸೂಚನೆ

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 2ನೇ ಆರೋಪಿ ಸತ್ಯನಾರಾಯಣ ವರ್ಮಾ ಅವರನ್ನು ಜಾರಿ ನಿರ್ದೇಶನಾಲಯದ ಕಸ್ಟಡಿಗೆ ಒಪ್ಪಿಸುವ ಬಾಡಿ ವಾರೆಂಟ್ ಆದೇಶ ಪಾಲಿಸದ ಕಾರಾಗೃಹಗಳ ಡಿಜಿಪಿ ಮತ್ತು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್ ರನ್ನು ಖುದ್ದು ಹಾಜರಾಗುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ.
ಪ್ರಕರಣದ ಆರೋಪಿ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ನ್ಯಾಯಾಂಗ ಬಂಧನ ವಿಸ್ತರಣೆ ಕುರಿತ ವಿಚಾರಣೆಗಾಗಿ ವಿಡಿಯೊ ಕಾನ್ಸರೆನ್ಸ್ ಮುಖಾಂತರ ನ್ಯಾಯಾಲಯಕ್ಕೆ ಇಡಿ ಅಧಿಕಾರಿಗಳು ಹಾಜರು ಪಡಿಸಿದ್ದರು.
ಪ್ರಕರಣದ ಎರಡನೇ ಆರೋಪಿಯಾಗಿರುವ ಸತ್ಯನಾರಾಯಣ ವರ್ಮಾರನ್ನು ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ ನ್ಯಾಯಾಲಯ ಎರಡು ಬಾರಿ ಬಾಡಿ ವಾರೆಂಟ್ ಹೊರಡಿಸಿದೆ. ಆದರೆ, ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಇದನ್ನು ಪಾಲಿಸಿಲ್ಲ. ಬದಲಿಗೆ ಆರೋಪಿಯನ್ನು ಮತ್ತೊಂದು ಪ್ರಕರಣದಲ್ಲಿ ರಾಜ್ಯ ತನಿಖಾ ಸಂಸ್ಥೆಗಳ (ಸಿಐಡಿ) ವಶಕ್ಕೆ ನೀಡಿದ್ದಾರೆ,” ಎಂದು ಈ ವೇಳೆ ಇಡಿ ವಿಶೇಷ ಸರ್ಕಾರಿ ಅಭಿಯೋಜಕ ಪಿ.ಪ್ರಸನ್ನಕುಮಾರ್ ನ್ಯಾಯಾಲಯದ ಗಮನಕ್ಕೆ ತಂದರು.
ನ್ಯಾಯಾಲಯದ ಆದೇಶ ಉಲ್ಲಂಘಿಸಿದ ರಾಜ್ಯ ಕಾರಾಗೃಹ ಗಳ ಡಿಜಿಪಿ ಮತ್ತು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್ ಗೆ ನೋಟಿಸ್ ಶೋಕಾಸ್ ಜಾರಿಗೊಳಿಸಿತು. ಮುಂದಿನ ವಿಚಾರಣೆ ವೇಳೆಗೆ ಇಬ್ಬರೂ ಖುದ್ದು ಹಾಜರಿರಬೇಕು ಎಂದು ಆದೇಶ ಹೊರಡಿಸಿತು. ಆರೋಪಿ ಮಾಜಿಸಚಿವ ನಾಗೇಂದ್ರ ನ್ಯಾಯಾಂಗ ಬಂಧನದ ಅವಧಿಯನ್ನು ಆಗಸ್ಟ್ 14ರವರೆಗೆ ವಿಸ್ತರಿಸಿ ಕೋರ್ಟ್ , ವಿಚಾರಣೆಯನ್ನು ಮುಂದೂಡಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ