ಮಾನನಷ್ಟ ಮೊಕದ್ದಮೆ :ಸ್ಪಷ್ಟ ಪುರಾವೆಗಳಿಲ್ಲದಿದ್ದರೆ ಪ್ರತಿವಾದಿಯನ್ನ ಪಕ್ಷಕಾರರನ್ನಾಗಿ ಸೇರಿಸಲಾಗದು – ಹೈಕೋರ್ಟ್
ಬೆಂಗಳೂರು: ಮಾನನಷ್ಟ ಮೊಕದ್ದಮೆಯಲ್ಲಿ ಮಾನಹಾನಿಕರ ವಿಷಯದ ಬಗ್ಗೆ ಪ್ರತಿವಾದಿಗಳ ವಿರುದ್ದ ಯಾವುದೇ ನಿರ್ದಿಷ್ಟ ಆರೋಪಗಳು ಅಥವಾ ಸ್ಪಷ್ಟ ಪುರಾವೆಗಳಿಲ್ಲದಿದ್ದರೆ, ಅವರನ್ನು ಮಾನನಷ್ಟ ದಾವೆಯಲ್ಲಿ ಪಕ್ಷಗಾರರನ್ನಾಗಿ ಸೇರಿಸಲಾಗುವುದಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಪ್ರಕರಣದ ಪ್ರತಿವಾದಿ ನಯನ ಕೃಷ್ಣ ಅವರು ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ನಲ್ಲಿ ದಾವೆಯೊಂದನ್ನು ಹಾಕಿ ಅರ್ಜಿದಾರರು ಸೇರಿದಂತೆ ಪ್ರತಿವಾದಿಗಳ ವಿರುದ್ಧ ತಮ್ಮ ವಿರುದ್ಧ ಯಾವುದೇ ಸುದ್ದಿ ಪ್ರಕಟಿಸದಂತೆ ಶಾಶ್ವತ ನಿಬಂಧಕಾಜ್ಞೆ ಬಯಸಿದ್ದರು.
ಈ ಪ್ರಕರಣದಲ್ಲಿ ಆರನೇ ಪ್ರತಿವಾದಿಯಾಗಿದ್ದ ಗೂಗಲ್ ಇಂಡಿಯಾ ತಮ್ಮ ವಿರುದ್ಧ ಸ್ಪಷ್ಟ ಆರೋಪ ಅಥವಾ ಪುರಾವೆ ಇಲ್ಲದ ಹಿನ್ನೆಲೆಯಲ್ಲಿ ತಮ್ಮನ್ನು ಪಕ್ಷಕಾರರಿಂದ ತೆಗೆದು ಹಾಕಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ವಿರುದ್ಧ ಮಾನಹಾನಿಕರ ಅಂಶಗಳನ್ನು ಪ್ರತಿವಾದಿಯವರು ಪ್ರಕಟಿಸಿದ್ದಾರೆ ಎಂಬ ಬಗ್ಗೆ ದಾವೆಯಲ್ಲಿ ಯಾವುದೇ ನಿರ್ದಿಷ್ಟ ಆರೋಪಗಳಿಲ್ಲ, ಸ್ಪಷ್ಟ ಪುರಾವೆಗಳೂ ಇಲ್ಲ. ಎಂದು ವಾದ ಮಂಡಿಸಿದ ಅರ್ಜಿದಾರರು, ತಮ್ಮನ್ನು ಪಕ್ಷಕಾರರನ್ನಾಗಿ ಮಾಡಿದ್ದ ಪ್ರಕರಣದಿಂದ ಕೈಬಿಡಬೇಕು ಎಂದು ಕೋರಿಕೆ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ವಿಜಯ ಕುಮಾರ್ ಎ ಪಾಟೀಲ್ ಅವರಿದ್ದ ನ್ಯಾಯಪೀಠವು ಪ್ರತಿವಾದಿ ವಿರುದ್ಧ ನಿರ್ದಿಷ್ಟ ಆರೋಪಗಳು ಅಥವಾ ಸ್ಪಷ್ಟ ಪುರಾವೆಗಳು ಇಲ್ಲದಿದ್ದರೆ ಅಂತಹ ಸಂಸ್ಥೆ ಅಥವಾ ವ್ಯಕ್ತಿಗಳನ್ನು ಪಕ್ಷಕಾರರನ್ನಾಗಿ ಸೇರಿಸಲಾಗದು ಎಂದು ತಿಳಿಸಿದೆ.
‘ಎಂ.ಜೆ. ಜಕಾರಿಯಾ ಸೇಟ್ ವಿರುದ್ಧ ಟಿ.ಎಂ. ಮೊಹಮ್ಮದ್ ಮತ್ತಿತರರು’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಮತ್ತು ‘ಗೋಲ್ಡ್ ಮೈನ್ಸ್ ಟೆಲಿಫಿಲ್ಡ್ ಪ್ರೈ. ಲಿ. ವಿರುದ್ಧ ಸಾಯಿ ಎಂಟರ್ಟೈನ್ಮೆಂಟ್ ಪ್ರೈ. ಲಿ.’ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪನ್ನು ಅವರು ಅವಲಂಬಿಸಿದ್ದರು.
ಎಂ.ಜೆ. ಜಕಾರಿಯಾ ಸೇಟ್ ಪ್ರಕರಣದಲ್ಲಿ ಡಬ್ಬು ಹೇ ವಿರುದ್ಧ ಅಶ್ವಿನಿ ಕುಮಾರ್ ಸಮಂತ (AIR 1958 Cal 269) ಪ್ರಕರಣದಲ್ಲಿ ಕೊಲ್ಕತಾ ಹೈಕೋರ್ಟ್ ನೀಡಿದ್ದ ತೀರ್ಪಿನ್ನು ಅಂಶಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ಅರ್ಜಿದಾರರ ಅರ್ಜಿಯನ್ನು ಪುರಸ್ಕರಿಸಿತು.
ದಾವೆಯ ವಾದ ಪತ್ರದಲ್ಲಿ ಪಕ್ಷಕಾರರು ಪ್ರಕಟಿಸಿದ ಪೋಸ್ಟ್ ಮಾಡಿದ ಅಥವಾ ಪ್ರಸಾರ ಮಾಡಿದ ಮಾನಹಾನಿಕರ ವಿಷಯದ ಬಗ್ಗೆ ಯಾವುದೇ ನಿರ್ದಿಷ್ಟ ಆರೋಪಗಳು ಅಥವಾ ಪುರಾವೆಗಳಿಲ್ಲದಿದ್ದರೆ, ಕಂಪೆನಿಯನ್ನು ಮಾನನಷ್ಟ ದಾವೆಯಲ್ಲಿ ಪಕ್ಷಗಾರರನ್ನಾಗಿ ಸೇರಿಸಲಾಗುವುದಿಲ್ಲ. ಅಂತಹ ವಾದಗಳ ಅನುಪಸ್ಥಿತಿಯಲ್ಲಿ ಪಕ್ಷಗಾರರನ್ನು ತೆಗೆದುಹಾಕಲು ಆದೇಶಿಸಬಹುದು ಎಂದು ನ್ಯಾಯಪೀಠ ಹೇಳಿದೆ. ಯಾರ ವಿರುದ್ಧ ಯಾರು ಯಾವ ರೀತಿಯ ಹೇಳಿಕೆಗಳನ್ನು ಹೇಳಿದ್ದಾರೆ ಮತ್ತು ಪ್ರಕಟಿಸಿದ್ದಾರೆ ಎಂಬುದನ್ನು ದಾವೆಯಲ್ಲಿ ಸ್ಪಷ್ಟವಾಗಿ ನಮೂದಿಸಬೇಕು. ಆದರೆ, ವಾದಪತ್ರದಲ್ಲಿ ಅಂತಹ ಅಂಶಗಳು ಕಂಡುಬರುತ್ತಿಲ್ಲ ಎಂದು ನ್ಯಾಯಪೀಠ ತಿಳಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿಕೆ
