07/03/2026

Law Guide Kannada

Online Guide

ನ್ಯಾಯಮಂಡಳಿಗಳಿಗೆ ಸೌಲಭ್ಯಗಳನ್ನ ನೀಡಲು ಆಗದಿದ್ದರೆ ಅವುಗಳನ್ನ ರದ್ದುಗೊಳಿಸಿ: ಸರ್ಕಾರಕ್ಕೆ ಸುಪ್ರೀಂ ತರಾಟೆ

ನವದೆಹಲಿ: ನ್ಯಾಯಮಂಡಳಿಗಳಿಗೆ ಸೌಲಭ್ಯಗಳನ್ನ ನೀಡಲು ಆಗದಿದ್ದರೆ ಅವುಗಳನ್ನ ರದ್ದುಗೊಳಿಸಿ ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ ಬೀಸಿದೆ.

ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಆರ್. ಮಹಾದೇವನ್ ಅವರನ್ನೊಳಗೊಂಡ ಪೀಠ ಕೇಂದ್ರ ಸರ್ಕಾರವನ್ನ ತರಾಟೆ ತೆಗೆದುಕೊಂಡಿದ್ದು, ಹೈಕೋರ್ಟ್ ಗಳ ಮಾಜಿ ನ್ಯಾಯಾಧೀಶರು ನಿವೃತ್ತಿಯ ಬಳಿಕ ನ್ಯಾಯಮಂಡಳಿಗಳಲ್ಲಿ ಕೆಲಸ ಮಾಡಲು ಹಿಂಜರಿಯುತ್ತಿರುವುದಕ್ಕೆ ಅಲ್ಲಿರುವ ಸೌಕರ್ಯಗಳ ಕೊರತೆಯೇ ಕಾರಣ. ಈ ಪರಿಸ್ಥಿತಿಯನ್ನು ನಿಭಾಯಿಸಲು ಸರಕಾರಕ್ಕೆ ಸಾಧ್ಯವಾಗದಿದ್ದರೆ ಈ ನ್ಯಾಯಮಂಡಳಿಗಳನ್ನು ರದ್ದುಗೊಳಿಸಬೇಕು. ಇಂಥ ನ್ಯಾಯಮಂಡಳಿಗಳಿಗೆ ಸೌಕರ್ಯಗಳನ್ನು ಕೊಡಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗದಿದ್ದರೆ, ಅವುಗಳನ್ನು ರದ್ದುಪಡಿಸಬೇಕು ಹಾಗೂ ಎಲ್ಲಾ ಪ್ರಕರಣಗಳನ್ನು ಹೈಕೋರ್ಟ್ ಗಳಿಗೆ ಕಳುಹಿಸಬೇಕು ಎಂದು ಕಿಡಿಕಾರಿದೆ.

ಯಾಕೆ “ಅವರು ಅರ್ಜಿ ಹಾಕುತ್ತಾರೆ, ಸಂದರ್ಶನಕ್ಕೆ ಹಾಜರಾಗುತ್ತಾರೆ ಹಾಗೂ ಬಳಿಕ ಯಾಕೆ ಹುದ್ದೆಯನ್ನು ಸ್ವೀಕರಿಸುವುದಿಲ್ಲ? ಅದರೆ, ನ್ಯಾಯಮಂಡಳಿಯ ಸದಸ್ಯನಾಗುವುದು ಎಂದರೆ ಏನು ಎಂಬ ವಾಸ್ತವ ಅವರಿಗೆ ಅರ್ಥವಾಗಿರುತ್ತದೆ.

ಅವರ ಪೈಕಿ ಕೆಲವರು ಹೈಕೋರ್ಟ್ಗಳ ಮಾಜಿ ಮುಖ್ಯ ನ್ಯಾಯಾಧೀಶರು ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರು. ಅವರನ್ನು ನ್ಯಾಯಮಂಡಳಿಗಳ ಅಧ್ಯಕ್ಷರಾಗಿ ನೇಮಿಸಲಾಗುತ್ತದೆ. ಆದರೆ, ಅವರಿಗೆ ಯಾವುದೇ ಸೌಲಭ್ಯ ನೀಡಲಾಗುವುದಿಲ್ಲ. ಲೇಖನ ಸಾಮಗ್ರಿಗಳಿಗೂ ಅವರು ವಿನಂತಿ ಮಾಡುತ್ತಲೇ ಇರಬೇಕಾಗುತ್ತದೆ.

ಇದು, ಸರಕಾರವು ನ್ಯಾಯಮಂಡಳಿಗಳನ್ನು ಹೇಗೆ ನಡೆಸಿಕೊಳ್ಳುತ್ತದೆ ಎನ್ನವುದನ್ನು ತೋರಿಸುತ್ತದೆ. ತಪ್ಪು ನಿಮ್ಮಲ್ಲಿದೆ. ನೀವು ನ್ಯಾಯಮಂಡಳಿಗಳನ್ನು ರಚಿಸಿದ್ದೀರಿ” ಎಂದು ಸರಕಾರಕ್ಕೆ ಸುಪ್ರೀಂ ಕೋರ್ಟ್ ನ್ಯಾಯಪೀಠ ಕ್ಲಾಸ್ ತೆಗೆದುಕೊಂಡಿತು.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.