07/03/2026

Law Guide Kannada

Online Guide

ಕಾನೂನು ಪದವಿ ಪಡೆದವರೆಲ್ಲ ವಕೀಲರಲ್ಲ: ಪೂರ್ವಾನುಮತಿ ಇಲ್ಲದೆ ವಕೀಲರಿಗೆ ಸಮನ್ಸ್ ನೀಡುವಂತಿಲ್ಲ – ಸುಪ್ರೀಂಕೋರ್ಟ್

ನವದೆಹಲಿ: ಪೂರ್ವಾನುಮತಿ ಪಡೆಯದೇ ವಕೀಲರಿಗೆ ಸಮನ್ಸ್ ಜಾರಿ ಮಾಡುವಂತಿಲ್ಲ, ಪೊಲೀಸ್ ವರಿಷ್ಠಾಧಿಕಾರಿ ಮಟ್ಟದ ಅಧಿಕಾರಿಗಿಂತ ಮೇಲ್ಪಟ್ಟ ದರ್ಜೆಯ ಅಧಿಕಾರಿಯ ಅನುಮತಿ ಪಡೆದೇ ವಕೀಲರಿಗೆ ಸಮನ್ಸ್ ಜಾರಿಗೊಳಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಹಾಗೆಯೇ ಕಾನೂನು ಪಡೆದವರೆಲ್ಲ ವಕೀಲರಲ್ಲ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡು ನ್ಯಾಯಾಲಯದಲ್ಲಿ ನಿರಂತರ ಕಾನೂನು ವೃತ್ತಿ (ಪ್ರಾಕ್ಟಿಸ್) ಮಾಡದೆ ಇರುವವರನ್ನು ಅಡ್ವಕೇಟ್ ಗಳೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ.

ಕಕ್ಷಿದಾರರಿಗೆ ಕಾನೂನು ಸಲಹೆ ನೀಡಿದ ಕಾರಣಕ್ಕೆ ವಕೀಲರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದ ಸಂಬಂಧ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿ, ನ್ಯಾಯಮೂರ್ತಿಗಳಾದ ಕೆ. ವಿನೋದ್ ಚಂದ್ರನ್ ಮತ್ತು ಎನ್. ವಿ. ಅಂಜಾರಿಯಾ ಅವರಿದ್ದ ನ್ಯಾಯಪೀಠವು, ಭಾರತೀಯ ಸಾಕ್ಷ್ಯ ಅಧಿನಿಯಮ (ಬಿ.ಎಸ್.ಎ.)ದ ಸೆಕ್ಷನ್ 132ರ ಪ್ರಕಾರ ಸಾಂಸ್ಥಿಕ ವಕೀಲರು ನ್ಯಾಯಾಲಯದಲ್ಲಿ ವಾದ ಮಂಡಿಸುವ ವಕೀಲರಲ್ಲ. ಹಾಗಾಗಿ, ಕಾನೂನು ಪದವಿ ಪಡೆದ ಎಲ್ಲ ಲಾಯರ್ ಗಳು ವಕೀಲರಲ್ಲ. ಸುಪ್ರೀಂ ಕೋರ್ಟ್ ಕೇವಲ ವೃತ್ತಿಪರ ಸವಲತ್ತುಗಳ ಕಾರ್ಯವಿಧಾನದ ಕುರಿತಷ್ಟೇ ತೀರ್ಪು ನೀಡಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.

ಲಾಯರ್ ಗಳಿಗೂ ಅಡ್ವಕೇಟ್ ಗಳಿಗೂ ವ್ಯತ್ಯಾಸವಿದೆ ಎಂದು ಹೇಳಿರುವ ತೀರ್ಪು, ಈ ಎರಡು ಪದಗಳ ನಡುವಿನ ಸೂಕ್ಷ್ಮತೆಯ ಮೇಲೆ ಬೆಳಕು ಚೆಲ್ಲಿದೆ. ಕಾನೂನು ಪದವಿ ಪಡೆದ ಎಲ್ಲಾ ಲಾಯರ್ ಗಳೂ ಅಡ್ವಕೇಟ್ಗಳಲ್ಲ. ಸಂಬಳ ಪಡೆದು ಸಾಂಸ್ಥಿಕ ಕಾನೂನು ಸಲಹೆಗಾರರಾಗಿರುವವರು ಅಡ್ವಕೇಟ್ ಪದದ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ನ್ಯಾಯಾಲಯ ಹೇಳಿರುವಂತೆ ಲಾಯರ್ ಎಂಬುವವರು ಕಾನೂನು ಶಿಕ್ಷಣ ಪಡೆದ ಯಾವುದೇ ವ್ಯಕ್ತಿ. ಆದರೆ ಅಡ್ವಕೇಟ್ ಎಂಬುದು ವಕೀಲರ ಕಾಯಿದೆ 1961ರ ಅಡಿಯಲ್ಲಿ ನಿರ್ಧರಿಸಲಾದ ವಿಶೇಷ ಕಾನೂನು ಸ್ಥಾನಮಾನವಾಗಿದೆ. ವಿವಿಧ ರಾಜ್ಯಗಳ ವಕೀಲರ ಪರಿಷತ್ತಿನಲ್ಲಿ ನೋಂದಾಯಿತರಾದವರನ್ನು ಮಾತ್ರ ಅಡ್ವಕೇಟ್ಗಳೆಂದು ಪರಿಗಣಿಸಲಾಗುತ್ತದೆ.

ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡು ನ್ಯಾಯಾಲಯದಲ್ಲಿ ನಿರಂತರ ಕಾನೂನು ವೃತ್ತಿ (ಪ್ರಾಕ್ಟಿಸ್) ಮಾಡದೆ ಇರುವವರನ್ನು ಅಡ್ವಕೇಟ್ ಗಳೆಂದು ಪರಿಗಣಿಸಲು ಸಾಧ್ಯವಿಲ್ಲ. ಭಾರತೀಯ ಸಾಕ್ಷ ಅಧಿನಿಯಮ 2023ರ ಪ್ರಕಾರ ಕಕ್ಷಿದಾರ ಮತ್ತು ಅಡ್ವಕೇಟ್ ನಡುವಿನ ಸಂಭಾಷಣೆ ಗೌಪ್ಯವಾಗಿರಬೇಕೆಂದು ರಕ್ಷಣೆ ನೀಡಿರುವ ನ್ಯಾಯಪೀಠ, ಈ ರಕ್ಷಣೆ ಕೋರ್ಟ್ ಮುಂದೆ ವಾದ ಮಂಡಿಸುವ ವಕೀಲರಿಗೆ ಮಾತ್ರ ಸೀಮಿತವಾಗಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.