ಸತ್ಯ ಮರೆಮಾಚಿ ವಂಚನೆಯಿಂದ ಲೋಕ ಅದಾಲತ್ ಡಿಕ್ರಿ: 3ನೇ ವ್ಯಕ್ತಿಯೂ ಆದೇಶ ಪ್ರಶ್ನಿಸಬಹುದೇ..?
ಬೆಂಗಳೂರು: ಸತ್ಯವನ್ನು ಮರೆಮಾಚಿ ವಂಚನೆಯಿಂದ ಲೋಕ ಅದಾಲತ್ ವ್ಯವಸ್ಥೆಯಡಿ ಡಿಕ್ರಿ ಪಡೆದಿದ್ದರೆ, ಅಂತಹ ಡಿಕ್ರಿಯನ್ನು ಮೂರನೇ ವ್ಯಕ್ತಿಯೂ ಸಹ ಪ್ರಶ್ನಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ವಿಜಯನಗರ ಜಿಲ್ಲೆ ಹೊಸಪೇಟೆಯ ಸಿವಿಲ್ ನ್ಯಾಯಾಲಯವು ಲೋಕ ಅದಾಲತ್ ನಲ್ಲಿ ಹೊರಡಿಸಲಾದ ರಾಜಿ ಡಿಕ್ರಿಯನ್ನು ಪ್ರಶ್ನಿಸಲಾದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠವು, ಸೂಕ್ತ ಮತ್ತು ಅಗತ್ಯ ವ್ಯಕ್ತಿಯನ್ನು ಪ್ರತಿವಾದಿಯನ್ನಾಗಿ ಮಾಡದೆ ಲೋಕ್ ಅದಾಲತ್ ನಿಂದ ವಂಚನೆಯಿಂದ ಡಿಕ್ರಿ ಆದೇಶವನ್ನು ಪಡೆದುಕೊಂಡಿದ್ದಾರೆ ಎಂಬ ಆರೋಪಗಳು ಬಂದಾಗ, ಪ್ರಕರಣದ ಸತ್ಯಾಸತ್ಯತೆ ಅವಲಂಬಿಸಿ ಮೂರನೇ ವ್ಯಕ್ತಿಯೂ ಸಹ ಅರ್ಜಿಯ ಮೂಲಕ ಲೋಕ್ ಅದಾಲತ್ ಆದೇಶವನ್ನು ಪ್ರಶ್ನಿಸಲು ಅವಕಾಶವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಾಪೀಠವು, ಹೊಸಪೇಟೆ ನ್ಯಾಯಾಲಯದಲ್ಲಿ ಸಿವಿಲ್ ಮೊಕದ್ದಮೆಯನ್ನು ಮರುಸ್ಥಾಪಿಸಲು ಆದೇಶಿಸಿತು. ರಾಜಿ ಒಪ್ಪಂದದ ಪ್ರಕಾರ ನಡೆಸಲಾದ ಯಾವುದೇ ಹಣಕಾಸಿನ ವಹಿವಾಟುಗಳನ್ನು ವಿಚಾರಣಾ ನ್ಯಾಯಾಲಯದ ಮುಂದೆ ಠೇವಣಿ ಇಡಬೇಕು. ಅದು ವಿಭಜನಾ ಪ್ರಕ್ರಿಯೆಗಳ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತದೆ ಎಂದು ನಿರ್ದೇಶಿಸಿತು. ಪ್ರಕರಣದ ದಾಖಲೆ, ನಾಗರಿಕ ದಂಡ ಸಂಹಿತೆಯ ನಿಬಂಧನೆ ಮತ್ತು ಹಿಂದಿನ ತೀರ್ಪುಗಳನ್ನು ಪರಿಶೀಲಿಸಿದ ನ್ಯಾಯಪೀಠವು, “ಕೆಲವು ಸಂದರ್ಭಗಳಲ್ಲಿ ವಿಚಾರಣೆಗೆ ಅಗತ್ಯವಾಗಿದ್ದರೂ ಪ್ರತಿವಾದಿಗಳನ್ನು ಉದ್ದೇಶಪೂರ್ವಕವಾಗಿ ಪಕ್ಷಕಾರರನ್ನಾಗಿ ಮಾಡಿಲ್ಲ ಎಂಬ ಆಧಾರದ ಮೇಲೆ ವಂಚನೆ ಆರೋಪವಿದ್ದರೆ, ಲೋಕ್ ಅದಾಲತ್ ತೀರ್ಪನ್ನು ಪ್ರಶ್ನಿಸಲು ಮೂರನೇ ವ್ಯಕ್ತಿಗೆ ರಿಟ್ ನ್ಯಾಯ ವ್ಯಾಪ್ತಿಯನ್ನು ಕೋರಲು ಅರ್ಹತೆ ಇದೆ” ಎಂದು ನ್ಯಾಯಪೀಠ ತಿಳಿಸಿತು.
ಏನಿದು ಪ್ರಕರಣ…
ಈ ಪ್ರಕರಣವು ಕಮಲಾಪುರ ಗ್ರಾಮದಲ್ಲಿನ ಭೂ ವಿಭಜನೆ ವಿವಾದಕ್ಕೆ ಸಂಬಂಧಿಸಿದ್ದಾಗಿದ್ದು, ಆಸ್ತಿಗಳ ಮೂಲ ಮಾಲೀಕರಾದ ಖೇಮ್ಮಣಿ ಹನುಮಂತಪ್ಪ ಅವರ ಕುಟುಂಬಕ್ಕೆ ಸೇರಿದ ನಾಗಮ್ಮನಾಗಲಾಪುರ ಮತ್ತು ಕರದಂತಪ್ಪ ಅವರ ಮಕ್ಕಳ ನಡುವೆ ಲೋಕ ಅದಾಲತ್ ಮುಂದೆ ರಾಜಿ ಅರ್ಜಿ ಯನ್ನು ಸಲ್ಲಿಸಲಾಗಿತ್ತು. ಆದರೆ ಒಂದೇ ಕುಟುಂಬದ ಭಾಗವಾಗಿದ್ದ ಗುರಮ್ಮ ಮತ್ತು ಅವರ ಮಕ್ಕಳನ್ನೂ ಈ ಮೊಕದ್ದಮೆಯಲ್ಲಿ ಪ್ರತಿವಾದಿಗಳನ್ನಾಗಿ ಮಾಡಿರಲಿಲ್ಲ. 2023ರ ಜುಲೈ 8ರಂದು ಹೊಸಪೇಟೆ ನ್ಯಾಯಾಲಯ ಹೊರಡಿಸಿದ್ದ ತೀರ್ಪನ್ನು ಪ್ರಶ್ನಿಸಿ. ಗುರಮ್ಮ ಮತ್ತು ಅವರ ಮಕ್ಕಳು ಅರ್ಜಿ ಸಲ್ಲಿಸಿ ತಾವು ಅಗತ್ಯ ಪಕ್ಷಗಳೆಂದು ವಾದಿಸಿದರು ಮತ್ತು ಆಸ್ತಿಯಲ್ಲಿ ಕಾನೂನುಬದ್ದ ಪಾಲನ್ನು ನಿರಾಕರಿಸುವ ಉದ್ದೇಶದಿಂದ ರಾಜಿ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದ್ದರು.
ಮೊದಲಿಗೆ ಅವರು ಮೇಲ್ಮನವಿ ಸಲ್ಲಿಸಿದ್ದು ಆದರೆ ಲೋಕ ಅದಾಲತ್ ರಾಜಿಯಿಂದ ಪಡೆದ ತೀರ್ಪಿನ ವಿರುದ್ಧ ಮೇಲ್ಮನವಿ ಮಾನ್ಯವಾಗದು ಎಂದ ನಂತರ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
