ವಾರ್ಷಿಕ ವೇತನ ಬಡ್ತಿಯ ಹಿಂದಿನ ದಿನ ನಿವೃತ್ತಿಯಾದ ನೌಕರರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ
ಬೆಂಗಳೂರು: ವಾರ್ಷಿಕ ವೇತನ ಬಡ್ತಿಯ ಹಿಂದಿನ ದಿನ ನಿವೃತ್ತಿಯಾದ ನೌಕರರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದ್ದು ಕಾಲ್ಪನಿಕ ವಾರ್ಷಿಕ ವೇತನ ಬಡ್ತಿ ಮಂಜೂರು ಮಾಡಿ ಆದೇಶಿಸಿದೆ.
ವಾರ್ಷಿಕ ವೇತನ ಬಡ್ತಿ ದೊರೆಯುವ ದಿನಾಂಕದ ಹಿಂದಿನ ದಿನ ಸೇವೆಯಿಂದ ನಿವೃತ್ತಿಯಾದ ರಾಜ್ಯ ಸರ್ಕಾರಿ ನೌಕರರಿಗೆ ಒಂದು ಕಾಲ್ಪನಿಕ (Notional) ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡಿ, ಅದರ ಆಧಾರದ ಮೇಲೆ ಪಿಂಚಣಿಯನ್ನು ಮರುನಿಗದಿಪಡಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 51(1) ರ ಪ್ರಕಾರ, ವಾರ್ಷಿಕ ವೇತನ ಬಡ್ತಿಯು ಅದನ್ನು ಗಳಿಸಿದ ದಿನದ ಮರುದಿನದಿಂದ ಪ್ರಾಪ್ತವಾಗುತ್ತದೆ.
ಒಬ್ಬ ನೌಕರನು ಒಂದು ವರ್ಷದ ಅರ್ಹತಾದಾಯಕ ಸೇವೆಯನ್ನು ಪೂರ್ಣಗೊಳಿಸಿ ಜುಲೈ 1 ರಂದು ವಾರ್ಷಿಕ ವೇತನ ಬಡ್ತಿಗೆ ಅರ್ಹನಾಗಿದ್ದರೂ, ಜೂನ್ 30 ರಂದು ನಿವೃತ್ತಿಯಾದರೆ ಅವನಿಗೆ ಆ ಬಡ್ತಿಯ ಲಾಭ ದೊರೆಯುತ್ತಿರಲಿಲ್ಲ. ಇದರಿಂದಾಗಿ, ಪೂರ್ಣ ಒಂದು ವರ್ಷದ ಸೇವೆ ಸಲ್ಲಿಸಿ ಬಡ್ತಿಯನ್ನು “ಗಳಿಸಿದ್ದರೂ” ಕೇವಲ ಒಂದು ದಿನದ ತಾಂತ್ರಿಕ ಕಾರಣದಿಂದ ಆ ನೌಕರನ ಪಿಂಚಣಿ ಕಡಿಮೆಯಾಗುತ್ತಿತ್ತು.
ಈ ಸಂಬಂಧ ಭಾರತ ಸರ್ಕಾರ ವಿರುದ್ಧ ಎಂ. ಸಿದ್ದರಾಜು ಹಾಗೂ ಕೆಪಿಟಿಸಿಎಲ್ ವಿರುದ್ಧ ಸಿ.ಪಿ. ಮುಂದಿನಮನಿ ಪ್ರಕರಣಗಳಲ್ಲಿ ಮಹತ್ವದ ತೀರ್ಪು ನೀಡಿರುವ ಸುಪ್ರೀಂಕೋರ್ಟ್ , ವಾರ್ಷಿಕ ವೇತನ ಬಡ್ತಿಯು ಒಂದು ವರ್ಷದ ತೃಪ್ತಿಕರ ಸೇವೆಗೆ ನೀಡುವ ಪ್ರತಿಫಲವಾಗಿದೆ. ನೌಕರನು ಒಂದು ವರ್ಷದ ಸೇವೆಯನ್ನು ಪೂರ್ಣಗೊಳಿಸಿದ ನಂತರ, ಕೇವಲ ಬಡ್ತಿ ಜಾರಿಯಾಗುವ ದಿನಾಂಕದಂದು ಸೇವೆಯಲ್ಲಿ ಇಲ್ಲ ಎಂಬ ಕಾರಣಕ್ಕೆ ಅದನ್ನು ನಿರಾಕರಿಸುವುದು ನ್ಯಾಯಸಮ್ಮತವಲ್ಲ. ಈ ತೀರ್ಪಿನ ವಿರುದ್ಧ ಸಲ್ಲಿಸಲಾದ ಮರುಪರಿಶೀಲನಾ ಅರ್ಜಿಯನ್ನೂ ಸುಪ್ರೀಂ ಕೋರ್ಟ್ ವಜಾಗೊಳಿಸಿರುವುದರಿಂದ ಈ ವಿಷಯವು ಅಂತಿಮವಾಗಿ ಇತ್ಯರ್ಥಗೊಂಡಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಕೇಂದ್ರ ಸರ್ಕಾರವು ತನ್ನ ನೌಕರರಿಗೆ ದಿನಾಂಕ 20-05-2025ರ ಅಧಿಕೃತ ಜ್ಞಾಪನದ ಮೂಲಕ, ಜೂನ್ 30 ಅಥವಾ ಡಿಸೆಂಬರ್ 31 ರಂದು ನಿವೃತ್ತಿಯಾಗುವ ನೌಕರರಿಗೆ ಕೇವಲ ಪಿಂಚಣಿ ಲೆಕ್ಕಾಚಾರದ ಉದ್ದೇಶಕ್ಕಾಗಿ ಒಂದು ಕಾಲ್ಪನಿಕ ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡಿದೆ.
ಕರ್ನಾಟಕ ಸರ್ಕಾರವು ಈಗ ಇದೇ ತತ್ತ್ವವನ್ನು ರಾಜ್ಯ ಸರ್ಕಾರಿ ನೌಕರರಿಗೂ ಅನ್ವಯಿಸಿದ್ದು ಈ ಕೆಳಗಿನ ಷರತ್ತುಗಳನ್ನು ಪೂರೈಸುವ ನೌಕರರು ಈ ಸೌಲಭ್ಯಕ್ಕೆ ಅರ್ಹರು.
ವಾರ್ಷಿಕ ವೇತನ ಬಡ್ತಿಗೆ ಅಗತ್ಯವಿರುವ ಒಂದು ವರ್ಷದ ಅರ್ಹತಾದಾಯಕ ಸೇವೆಯನ್ನು ಪೂರ್ಣಗೊಳಿಸಿರಬೇಕು.
ವಾರ್ಷಿಕ ವೇತನ ಬಡ್ತಿ ದೊರೆಯುವ ದಿನಾಂಕದಂದು ವಯೋನಿವೃತ್ತಿ ಅಥವಾ ಸ್ವಯಂ ನಿವೃತ್ತಿ ಹೊಂದಿರಬೇಕು.
ವಾರ್ಷಿಕ ವೇತನ ಬಡ್ತಿಯನ್ನು ಗಳಿಸಿರಬೇಕು.
ಸೌಲಭ್ಯ ಏನು?
ಒಂದು ಕಾಲ್ಪನಿಕ ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡಲಾಗುವುದು. ಆ ವೇತನದ ಆಧಾರದ ಮೇಲೆ ಪಿಂಚಣಿಯನ್ನು ಮರುನಿಗದಿಪಡಿಸಲಾಗುವುದು.
ಹೆಚ್ಚಿದ ಪಿಂಚಣಿ ಭವಿಷ್ಯದಲ್ಲಿ ದೊರೆಯಲಿದೆ.
ಈ ಆದೇಶದಡಿ ಕೆಲವು ಪ್ರಮುಖ ನಿರ್ಬಂಧಗಳಿವೆ:
- ಪಿಂಚಣಿಗೆ ಮಾತ್ರ ಅನ್ವಯ
ಕಾಲ್ಪನಿಕ ವೇತನ ಬಡ್ಡಿಯನ್ನು ಕೇವಲ ಪಿಂಚಣಿ ಲೆಕ್ಕಾಚಾರದ ಉದ್ದೇಶಕ್ಕಾಗಿ ಮಾತ್ರ ಪರಿಗಣಿಸಲಾಗುತ್ತದೆ. - ಇತರೆ ನಿವೃತ್ತಿ ಸೌಲಭ್ಯಗಳಿಗೆ ಅನ್ವಯಿಸುವುದಿಲ್ಲ
ಈ ಬಡ್ತಿಯನ್ನು ಕೆಳಗಿನ ಸೌಲಭ್ಯಗಳ ಲೆಕ್ಕಾಚಾರಕ್ಕೆ ಪರಿಗಣಿಸಲಾಗುವುದಿಲ್ಲ:
ನಿವೃತ್ತಿ ಉಪಧನ (DCRG)
ಗಳಿಕೆ ರಜೆ ನಗದೀಕರಣ
ಇತರೆ ಸೇವಾಂತ್ಯ ಸೌಲಭ್ಯಗಳು - ಬಾಕಿ ಹಣ ಸಿಗುವುದಿಲ್ಲ
ಈ ಆದೇಶವು ಭವಿಷಾನ್ವಯ (Prospective) ಆಗಿ ಮಾತ್ರ ಜಾರಿಯಾಗುತ್ತದೆ. - ಯಾರಿಗೆ ಅನ್ವಯಿಸುವುದಿಲ್ಲ?
ಸೇವೆಯಲ್ಲಿರುವಾಗಲೇ ಮೃತಪಟ್ಟ ನೌಕರರಿಗೆ
ಕಡ್ಡಾಯ ನಿವೃತ್ತಿ ದಂಡನೆಗೆ ಒಳಗಾದ ನೌಕರರಿಗೆ - ಈ ಸೌಲಭ್ಯ ಅನ್ವಯಿಸುವುದಿಲ್ಲ.
ಕುಟುಂಬ ಪಿಂಚಣಿದಾರರಿಗೂ ಪ್ರಯೋಜನ
ಅರ್ಹ ಪಿಂಚಣಿದಾರರು ಮೃತಪಟ್ಟಿದ್ದಲ್ಲಿ, ಅವರ ಕುಟುಂಬ ಪಿಂಚಣಿದಾರರು ಸಹ ಈ ಆದೇಶದಡಿ ಮರುನಿಗದಿಪಡಿಸಿದ ಪಿಂಚಣಿಯ ಪ್ರಯೋಜನವನ್ನು ಭವಿಷ್ಯಾನ್ವಯವಾಗಿ ಪಡೆಯಬಹುದು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
