ಅ ಬಾಲಕಿಯ ನೋವು, ಅವಮಾನ ಊಹಿಸಿ: ಅಪ್ರಾಪ್ತೆ ಗರ್ಭಧಾರಣೆ ಬಗ್ಗೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಕ್ಲಾಸ್
ನವದೆಹಲಿ: ಅಪ್ರಾಪ್ತ ಬಾಲಕಿಯ ಗರ್ಭಪಾತ ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನು ತರಾಟೆ ತೆಗೆದುಕೊಂಡ ಸುಪ್ರೀಂಕೋರ್ಟ್, ಅವಳ ನೋವು, ಅವಮಾನ ಊಹಿಸಿ ನೋಡಿ ಎಂದು ಕಳವಳ ವ್ಯಕ್ತಪಡಿಸಿತು. ಅಲ್ಲದೆ 20 ವಾರಗಳಿಗಿಂತ ಹೆಚ್ಚಿನ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಕಾನೂನನ್ನು ತಿದ್ದುಪಡಿ ಮಾಡುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕ್ಲಾಸ್ ತೆಗೆದುಕೊಂಡಿತು.
15 ವರ್ಷದ ಅತ್ಯಾಚಾರ ಸಂತ್ರಸ್ತೆಗೆ 31 ವಾರಗಳ ಗರ್ಭಪಾತ ಮಾಡಿಕೊಳ್ಳಲು ಅವಕಾಶ ನೀಡಿ ಆದೇಶಿಸಿದ್ದ ಹಿಂದಿನ ಆದೇಶದ ವಿರುದ್ಧ ಕ್ಯುರೇಟಿವ್ ಅರ್ಜಿ ಸಲ್ಲಿಸಿದ್ದಕ್ಕಾಗಿ ಕೇಂದ್ರ ಸರ್ಕಾರ ವಿರುದ್ದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ಅಂತಹ ನಿರ್ಧಾರವು ಸಂತ್ರಸ್ತೆ ಮತ್ತು ಆಕೆಯ ಕುಟುಂಬದ ಸದಸ್ಯರೇ ನಿರ್ಧರಿಸಿರಬೇಕು ಹೊರತು ಸರ್ಕಾರವಲ್ಲ. ಅತ್ಯಾಚಾರ ಕೇಸಲ್ಲಿ 20 ವಾರ ಮೀರಿದ ಗರ್ಭಪಾತಕ್ಕೆ ಅವಕಾಶ ನೀಡಿ ಎಂದು ಸೂಚಿಸಿತು.
15 ವರ್ಷದ ಬಾಲಕಿಗೆ ತನ್ನ 30 ವಾರಗಳ ಗರ್ಭದಾರಣೆಯನ್ನು ಅಂತ್ಯಗೊಳಿಸಲು ನೀಡಿದ ಆದೇಶವನ್ನು ರದ್ದುಗೊಳಿಸುವಂತೆ ಏಮ್ಸ್ ಅರ್ಜಿ ಸಲ್ಲಿಸಿತ್ತು. ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾ.ಜೋಯ್ಮಲ್ಯ ಬಾಗ್ಚಿ ಅವರ ಪೀಠವು, ಅತ್ಯಾಚಾರದಿಂದಾಗಿ ಗರ್ಭಧಾರಣೆ ಸಂಭವಿಸಿದಾಗ ಅದಕ್ಕೆ ಯಾವುದೇ ಸಮಯ ಮಿತಿ ಇರಬಾರದು ಮತ್ತು ಕಾಲಕ್ಕೆ ತಕ್ಕಂತೆ ಕಾನೂನು ಬದಲಾಗಬೇಕು. ಅಂತಿಮ ನಿರ್ಧಾರವು ಸಂತ್ರಸ್ತೆ ಮತ್ತು ಆಕೆಯ ಕುಟುಂಬದ ಮೇಲಿರುವುದರಿಂದ, ಸಂತ್ರಸ್ತೆಯ ಪೋಷಕರಿಗೆ ಈ ವಿಷಯದ ಬಗ್ಗೆ ಸೂಕ್ತ ಸಮಾಲೋಚನೆ ನೀಡುವಂತೆ ಏಮ್ಸ್ಗೆ ನಿರ್ದೇಶನ ನೀಡಿದೆ.
ಇದು ಮಕ್ಕಳ ಮೇಲಿನ ಅತ್ಯಾಚಾರದ ಪ್ರಕರಣವಾಗಿದ್ದು, ಗರ್ಭಪಾತವನ್ನು ಅನುಮತಿಸದಿದ್ದರೆ ಸಂತ್ರಸ್ತೆ ಜೀವನಪರ್ಯಂತ ಮಾನಸಿಕ ಆಘಾತವನ್ನು ಅನುಭವಿಸಬೇಕಾಗುತ್ತದೆ. ತಾಯಿಗೆ ಯಾವುದೇ ರೀತಿಯ ಶಾಶ್ವತ ದೈಹಿಕ ಹಾನಿಯಾಗದಿದ್ದರೆ, ಗರ್ಭಪಾತ ಮಾಡಬೇಕು ಎಂದು ನ್ಯಾಯಪೀಠವು ಹೇಳಿತು.
ದೇಶದಲ್ಲಿ ದತ್ತು ಪಡೆಯಲು ಸಾಕಷ್ಟು ಮಕ್ಕಳಿವೆ. ಅನೇಕ ಮಕ್ಕಳನ್ನು ಬೀದಿಗೆ ಬಿಡಲಾಗಿದೆ. ಇದರಲ್ಲಿ ಮಾಫಿಯಾ ಕೂಡ ನಡೆಯುತ್ತಿದೆ. ಇದು 15 ವರ್ಷದ ಬಾಲಕಿಯೊಬ್ಬಳ ಅನಗತ್ಯ ಗರ್ಭಧಾರಣೆಯಾಗಿದೆ. ಯಾವುದೇ ವ್ಯಕ್ತಿಯ ಮೇಲೆ ಬೇಡದ ಗರ್ಭದಾರಣೆಯನ್ನು ಹೇರಲು ಸಾಧ್ಯವಿಲ್ಲ. ಅವಳಿನ್ನು ಮಗು. ಅವಳು ಓದಬೇಕು, ಆದರೆ ನಾವು ಅವಳನ್ನು ತಾಯಿಯಾಗಲು ಒತ್ತಾಯಿಸುತ್ತಿದ್ದೇವೆ. ಅವಳು ಅನುಭವಿಸಿದ ನೋವು ಮತ್ತು ಅವಮಾನವನ್ನು ಊಹಿಸಿ ಎಂದು ನ್ಯಾಯಪೀಠ ಹೇಳಿದೆ ಏಮ್ಸ್ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಈ ಹಂತದಲ್ಲಿ ಗರ್ಭಪಾತ ಸಾಧ್ಯವಿಲ್ಲ. 30 ವಾರಗಳ ವೇಳೆಗೆ, ಭ್ರೂಣವು ಜೀವಂತ ಮಗುವಾಗಿ ಬೆಳೆದಿರುತ್ತದೆ. ಇದಲ್ಲದೆ, ಅಪ್ರಾಪ್ತ ತಾಯಿಯು ಜೀವಿನಪರ್ಯಂತ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಬಹುದು ಅಥವಾ ಗರ್ಭಧರಿಸಲು ಸಾಧ್ಯವಾಗದೇ ಇರಬಹುದು. ಜನನದ ನಂತರ ಮಗುವನ್ನು ದತ್ತು ಪಡೆಯಲು ನೀಡಬಹುದು ಎಂದು ತಿಳಿಸಿದರು.
ಗರ್ಭಾವಸ್ಥೆಯನ್ನು ಅಂತ್ಯಗೊಳಿಸುವ ನಿರ್ಧಾರವು ಬಲಿಪಶು ಮತ್ತು ಆಕೆಯ ಪೋಷಕರ ಇಚ್ಛೆಯನ್ನು ಅವಲಂಬಿಸಿರುತ್ತದೆ ಮತ್ತು ಮಾಹಿತಿಯುಕ್ತ ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ಅವರಿಗೆ ಏಮ್ಸ್ ಸಹಾಯ ಮಾಡುವುದು ಎಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ತಿಳಿಸಿತು.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
