24/04/2026

Law Guide Kannada

Online Guide

ಅತ್ಯಾಚಾರ ಪ್ರಕರಣ: ಅಪರಾಧ ನಿರೂಪಣೆಗೆ ಕೇವಲ ಸಂತ್ರಸ್ತೆ ಸಾಕ್ಷ್ಯ ಹೇಳಿಕೆ ಸಾಕು, ಅದರ ದೃಢೀಕರಣ ಅಗತ್ಯವಿಲ್ಲ – ಸುಪ್ರೀಂ ಕೋರ್ಟ್

ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ಅಪರಾಧ ನಿರೂಪಿಸಲು ಕೇವಲ ಸಂತ್ರಸ್ತೆ ಸಾಕ್ಷ್ಯ ಹೇಳಿಕೆ ಸಾಕು, ಸಂತ್ರಸ್ತೆಯ ಹೇಳಿಕೆಯು ನಂಬಲರ್ಹ ಮತ್ತು ವಿಶ್ವಾಸಾರ್ಹ ಎಂದು ಕಂಡುಬಂದರೆ, ಯಾವುದೇ ದೃಢೀಕರಣದ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಪಿ ಸದಾಶಿವಂ ಮತ್ತು ಬಿ.ಎಸ್. ಚೌಹಾಣ್ ಅವರಿದ್ದ ನ್ಯಾಯಪೀಠವು, ಅತ್ಯಾಚಾರ ಸಂತ್ರಸ್ತೆಯ ಹೇಳಿಕೆಯೇ ಆರೋಪಿಯನ್ನು ಕ್ರಿಮಿನಲ್ ವಿಚಾರಣೆಯಲ್ಲಿ ತಪ್ಪಿತಸ್ಥರೆಂದು ಘೋಷಿಸಲು ಸಾಕು. ಸಂತ್ರಸ್ತೆಯ ಸಾಕ್ಷ್ಯವು ವಿಶ್ವಾಸಾರ್ಹವೆಂದು ಕಂಡುಬಂದರೆ ಅದನ್ನು ಇತರ ಯಾವುದೇ ಸಾಕ್ಷಗಳಂತೆ ಪರೀಕ್ಷಿಸಬಾರದು. ಆಕೆಯ ಏಕೈಕ ಸಾಕ್ಷದ ಆಧಾರದ ಮೇಲೆ ನ್ಯಾಯಾಲಯವು ಆರೋಪಿಯನ್ನು ಶಿಕ್ಷೆಗೆ ಒಳಪಡಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಸುಪ್ರೀಂ ಕೋರ್ಟ್ ಇತರ ಮಹತ್ವದ ಪ್ರಕರಣಗಳಲ್ಲಿ ನೀಡಿದ ತೀರ್ಪುಗಳನ್ನು ಅವಲಂಬಿಸಿದ ನ್ಯಾಯಪೀಠ, ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆ ಅಪರಾಧಕ್ಕೆ ಸಹಚರಳಲ್ಲ, ಬದಲಾಗಿ ಇನ್ನೊಬ್ಬ ವ್ಯಕ್ತಿಯ ಕಾಮಕ್ಕೆ ಬಲಿಯಾಗುತ್ತಾಳೆ ಎಂಬುದು ಸರಳ ಕಾನೂನು. ಗಾಯಗೊಂಡ ಸಾಕ್ಷಿಗಿಂತ ಪ್ರಾಸಿಕ್ಯೂಟ್ರಿಕ್ಸ್ ಮೇಲ್ಪಂಕ್ತಿಯ ಸ್ಥಾನದಲ್ಲಿದ್ದಾರೆ. ಏಕೆಂದರೆ ಅವರು ಭಾವನಾತ್ಮಕ ಗಾಯದಿಂದ ಬಳಲುತ್ತಿದ್ದಾರೆ. ಆದ್ದರಿಂದ, ಅವರ ಸಾಕ್ಷ್ಯವನ್ನು ಸಹಚರರ ಸಾಕ್ಷದಂತೆಯೇ ಅನುಮಾನದಿಂದ ಪರೀಕ್ಷಿಸುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಭಾರತೀಯ ಸಾಕ್ಷ್ಯ ಕಾಯ್ದೆ, 1872, ಅವರ ಸಾಕ್ಷ್ಯವನ್ನು ವಾಸ್ತವಿಕ ಸಂಗತಿಗಳ ಮೂಲಕ ದೃಢೀಕರಿಸದ ಹೊರತು ಸ್ವೀಕರಿಸಲಾಗುವುದಿಲ್ಲ ಎಂದು ಎಲ್ಲಿಯೂ ಹೇಳುವುದಿಲ್ಲ ಎಂಬುದನ್ನು ಒತ್ತಿ ಹೇಳಿದ ನ್ಯಾಯಪೀಠವು, ಪ್ರಕರಣದ ದಾಖಲೆಯಲ್ಲಿ ಕಂಡುಬರುವ ಸಂಪೂರ್ಣ ಸನ್ನಿವೇಶಗಳು, ಅತ್ಯಾಚಾರದ ಸಂತ್ರಸ್ತೆಯು ಆರೋಪ ಹೊರಿಸಲ್ಪಟ್ಟ ವ್ಯಕ್ತಿಯನ್ನು ತಪ್ಪಾಗಿ ಸಿಲುಕಿಸುವ ಬಲವಾದ ಉದ್ದೇಶವನ್ನು ಹೊಂದಿಲ್ಲ ಎಂದು ಬಹಿರಂಗಪಡಿಸಿದರೆ, ನ್ಯಾಯಾಲಯವು ಸಾಮಾನ್ಯವಾಗಿ ಆಕೆಯ ಸಾಕ್ಷ್ಯವನ್ನು ಸ್ವೀಕರಿಸಲು ಯಾವುದೇ ಹಿಂಜರಿಕೆಯನ್ನು ಹೊಂದಿರಬಾರದು ಎಂದು ತಿಳಿಸಿದೆ.

ಸಂಪಾದಕರು
ಲಾಗೈಡ್ ಕನ್ನಡ‌ ಕಾನೂನು ಮಾಸಪತ್ರಿಕೆ

Copyright © All rights reserved. | Newsphere by AF themes.