ಪತ್ನಿ ಕೆಲಸದಾಕೆಯಲ್ಲ: ಅಡುಗೆ ಮಾಡದಿದ್ದರೆ ಅದು ಕ್ರೌರ್ಯವಲ್ಲ- ವಿಚ್ಚೇದನಕ್ಕೆ ನಿರಾಕರಿಸಿದ ಸುಪ್ರೀಂಕೋರ್ಟ್
ನವದೆಹಲಿ: ವೈವಾಹಿಕ ಜೀವನದಲ್ಲಿ ಗಂಡ ಹೆಂಡತಿ ಹೊಂದಿಕೊಂಡು ಹೋಗುವುದು ಉತ್ತಮ ಸಂಸಾರದ ಲಕ್ಷಣ. ಆದರೆ ಸಣ್ಣಪುಟ್ಟ ವಿಚಾರಕ್ಕೂ ಜಗಳ, ಮನಸ್ತಾಪದಿಂದಾಗಿ ದಂಪತಿಗಳು ವಿಚ್ಚೇದನದವರೆಗೂ ಹೋದ ಸಾಕಷ್ಟು ಉದಾಹರಣೆಗಳಿವೆ. ಈ ಮಧ್ಯೆ ಸಾಂಸಾರಿಕ ಜೀವನದ ಜವಾಬ್ದಾರಿಗಳ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಅವಲೋಕನ ಮಾಡಿದ್ದು, ವೈವಾಹಿಕ ಜೀವನದಲ್ಲಿ ಪತಿ, ಪತ್ನಿ ಜವಾಬ್ದಾರಿಗಳನ್ನು ಹಂಚಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದೆ.
ಹೌದು ಕುಟುಂಬ ನ್ಯಾಯಾಲಯವು ತನ್ನ ಪರವಾಗಿ ನೀಡಿದ್ದ ವಿಚ್ಛೇದನ ತೀರ್ಪನ್ನು ಹೈಕೋರ್ಟ್ ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಪತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂದೀಪ್ ಮೆಹ್ತಾ ಮತ್ತು ವಿಕ್ರಮ್ ನಾಥ್ ಅವರನ್ನೊಳಗೊಂಡ ಪೀಠವು, ಅಡುಗೆಯಂತಹ ಮನೆಗೆಲಸಗಳನ್ನು ಮಾಡಲು ಪತ್ನಿ ವಿಫಲಳಾಗಿದ್ದಾಳೆ ಎಂಬ ಕಾರಣವನ್ನು ‘ಕ್ರೌರ್ಯ’ ಎಂದು ಪರಿಗಣಿಸಿ ವಿಚ್ಛೇದನ ನೀಡಲು ಸಾಧ್ಯವಿಲ್ಲ’ ಎಂದು ತೀರ್ಪು ನೀಡಿದೆ.
ನೀವು ಮದುವೆಯಾಗುತ್ತಿರುವುದು ಮನೆಗೆಲಸದವಳನ್ನಲ್ಲ, ಬದಲಿಗೆ ಜೀವನ ಸಂಗಾತಿಯನ್ನು,” ಎಂದು ವಿಚಾರಣೆಯ ವೇಳೆ ನ್ಯಾಯಮೂರ್ತಿ ಮೆಹ್ತಾ ಮಾರ್ಮಿಕವಾಗಿ ನುಡಿದರು. ಇದಕ್ಕೆ ದನಿಗೂಡಿಸಿದ ನ್ಯಾಯಮೂರ್ತಿ ನಾಥ್, “ನೀವು ಕೂಡ ಅಡುಗೆ, ಬಟ್ಟೆ ಒಗೆಯುವುದು ಮುಂತಾದ ಕೆಲಸಗಳಲ್ಲಿ ಸಹಕರಿಸಬೇಕು. ಇಂದಿನ ಕಾಲಮಾನವೇ ಬೇರೆಯಿದೆ, ಎಂದು ಅಭಿಪ್ರಾಯಪಟ್ಟರು.
2017ರಲ್ಲಿ ವಿವಾಹವಾಗಿದ್ದ ಈ ದಂಪತಿಗೆ ಎಂಟು ವರ್ಷದ ಮಗನಿದ್ದು, ಮದುವೆಯಾದ ಒಂದು ವಾರದಲ್ಲೇ ಪತ್ನಿಯ ವರ್ತನೆ ಬದಲಾಗಿ ಅವಳು ಪತಿ ಮತ್ತು ಅತ್ತೆ-ಮಾವನಿಗೆ ನಿಂದಿಸುತ್ತಿದ್ದಳು, ಅಡುಗೆ ಮಾಡಲು ನಿರಾಕರಿಸುತ್ತಿದ್ದಳು ಮತ್ತು ಮಗನ ತೊಟ್ಟಿಲು ಶಾಸ್ತ್ರಕ್ಕೆ ಪತಿಯನ್ನು ಆಹ್ವಾನಿಸಿರಲಿಲ್ಲ ಎಂದು ಪತಿ ‘ಕ್ರೌರ್ಯ’ದ ಆರೋಪ ಹೊರಿಸಿ ವಿಚ್ಚೇದನ ಕೋರಿದ್ದನು.
ಈ ಆರೋಪಗಳನ್ನು ನಿರಾಕರಿಸಿದ ಪತ್ನಿ, ಪತಿ ಮತ್ತು ಅತ್ತೆ-ಮಾವನ ಒಪ್ಪಿಗೆಯ ಮೇರೆಗೆ ಹೆರಿಗೆಗಾಗಿ ತವರು ಮನೆಗೆ ಹೋಗಿದ್ದಾಗಿ ತಿಳಿಸಿದರು. ಅವರು ತೊಟ್ಟಿಲು ಶಾಸ್ತ್ರಕ್ಕೆ ಬಂದಿರಲಿಲ್ಲ ಮತ್ತು ಹಣ ಹಾಗೂ ಚಿನ್ನಕ್ಕಾಗಿ ಬೇಡಿಕೆ ಇಟ್ಟಿದ್ದರು, ಅಲ್ಲದೆ ತನ್ನ ಸಂಬಳವನ್ನು ನೀಡುವಂತೆ ಒತ್ತಡ ಹೇರುತ್ತಿದ್ದರು ಎಂದು ಪತ್ನಿ ದೂರಿದ್ದಾರೆ.
ಕುಟುಂಬ ನ್ಯಾಯಾಲಯವು ಮೊದಲು ಪತಿಯ ಪರವಾಗಿ ವಿಚ್ಛೇದನ ನೀಡಿತ್ತು. ಆದರೆ ನಂತರ ಹೈಕೋರ್ಟ್ ಆ ತೀರ್ಪನ್ನು ರದ್ದುಪಡಿಸಿತ್ತು. ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಂಧಾನಕ್ಕೆ ಕಳುಹಿಸಿತ್ತಾದರೂ, ಅಲ್ಲಿ ಯಾವುದೇ ಪರಿಹಾರ ಸಿಗಲಿಲ್ಲ. ಇದೀಗ ಪೀಠವು ಮುಂದಿನ ವಿಚಾರಣೆಗೆ ಪತಿ-ಪತ್ನಿ ಇಬ್ಬರೂ ಖುದ್ದಾಗಿ ಹಾಜರಿರುವಂತೆ ಸೂಚಿಸಿದೆ.
ಸಂಪಾದಕರು
ಲಾಗೈಡ್ ಕನ್ನಡ ಕಾನೂನು ಮಾಸಪತ್ರಿ
